`ಪಶ್ಚಿಮಘಟ್ಟದಲ್ಲಿ ಪರಿಸರವಾಗಿ ಸೂಕ್ಷ್ಮವಾಗಿರುವ ಪ್ರದೇಶಗಳ ಗುರುತಿಸುವಿಕೆಯ ಕಾರ್ಯ ಅತ್ಯಂತ ಪಾರದರ್ಶಕವಾಗಿರಬೇಕು. ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಹೊರತುಪಡಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. `ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಬ್ರಹತ್ ಯೋಜನೆಗಳಿಗೆ ಅನುಮತಿ ನೀಡುವ ವಿವೇಚನಾಧಿಕಾರ ಸರ್ಕಾರಗಳಿಗೆ ಇರಕೂಡದು’ ಎಂದು ಸಹ ಅವರು ಪ್ರತಿಪಾದಿಸಿದ್ದಾರೆ.
Advertisement. Scroll to continue reading.
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಿವಿಧ ನಿರ್ಭಂದಗಳನ್ನು ವಿಧಿಸುವ ಕುರಿತು ಕೇಂದ್ರ ಸರ್ಕಾರ ಜುಲೈ 27ರಂದು ಹೊರಡಿಸಿದ ಕರಡು ಅಧಿಸೂಚನೆಗೆ ತಮ್ಮ ಆಕ್ಷೇಪಣೆಯನ್ನು ದಾಖಲಿಸಿ ಈ ಕುರಿತು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಅರಣ್ಯ ಪರಿಸರ, ಹವಾಮಾನ ಬದಲಾವಣೆ ಇಲಾಖೆ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. `ಕೇಂದ್ರದ ಕರಡು ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಿಸಿರುವ ಹಾಗೂ ಪರಿಸರವಾಗಿ ಅತ್ಯಂತ ಸೂಕ್ಷ್ಮವಾಗಿರುವ ಪಶ್ಚಿಮಘಟ್ಟದಲ್ಲಿ ಬ್ರಹತ್ ಯೋಜನೆಗಳಿಗೆ ಅನುಮತಿ ನೀಡುವ ವಿವೇಚನಾಧಿಕಾರ ಉಳಿಸಿಕೊಳ್ಳುವ ಕೇಂದ್ರದ ಹಿಂಬಾಗಿಲ ಯತ್ನಗಳು ಸರಿಯಲ್ಲ .ಪಂಪ್ಡ್ ಸ್ಟೋರೇಜ, ನದಿತಿರುವು ಮತ್ತು ಅಣುವಿದ್ಯುತ್ ಮುಂತಾದ ಬ್ರಹತ್ ಮತ್ತು ಮಾರಕ ಯೋಜನೆಗಳಿಗೆ ಇಲ್ಲದ ನಿರ್ಭಂದ,ಜನರ ಬದುಕಿಗೆ ಏಕೆ?’ ಎಂದು ಚಂದ್ರಕಾoತ ಕೊಚರೇಕರ ಅವರು ಪ್ರಶ್ನಿಸಿದ್ದಾರೆ.
Advertisement. Scroll to continue reading.
`ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು ಹೊರಡಿಸಿರುವ ಕರಡು ಅಧಿಸೂಚನೆ ಪಾರದರ್ಶಕವಾಗಿಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವಲ್ಲಿ ಕೇರಳಕ್ಕೆ ಹಲವು ವಿನಾಯಿತಿ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಪ್ರತ್ಯೇಕ ಮಾನದಂಡ ಅನುಸರಿಸಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ಗುರುತಿಸಲು ಹಾಗೂ ಕೇರಳದ ಮಾದರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು’ ಎಂದವರು ಆಗ್ರಹಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಸುಮಾರು 350 ಕ್ಕೂ ಹೆಚ್ಚು ಜನವಸತಿ ಪ್ರದೇಶಗಳು ಸೇರಿದಂತೆ ಒಟ್ಟೂ 567 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಕೇಂದ್ರ ಘೋಷಿಸಿದೆ. ಇದು ಯಥಾವತ್ ಜಾರಿಗೆ ಬಂದರೆ ಜಿಲ್ಲೆಯ ಜನ ಜೀವನಕ್ಕೆ ಮಾರಕವಾಗಲಿದೆ. ಆದ್ದರಿಂದ ಈ ದಿಶೆಯಲ್ಲಿ ಜನಜಾಗ್ರತಿ ಮೂಡಿಸುವ ಕೆಲಸ ನಡೆದಿದೆ. ಜನರು, ವಿವಿಧ ಸಂಘಟನೆಯವರು ಕೇಂದ್ರದ ಕರಡು ಅಧಿಸೂಚನೆಗೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳು-ಗ್ರಾಮಸಭೆಗಳು ಕಸ್ತೂರಿ ರಂಗನ್ ವರದಿಯ ಯಥಾವತ್ ಅನುಷ್ಠಾನಕ್ಕೆ ತಮ್ಮ ವಿರೋದ ವ್ಯಕ್ತ ಪಡಿಸಿವೆ ಹಾಗೂ ಕೇಂದ್ರ ಸರ್ಕಾರದ 6ನೇ ಅಧಿಸೂಚನೆಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿವೆ’ ಎಂದವರು ವಿವರಿಸಿದ್ದಾರೆ.