ಮನೆಯೊಂದಕ್ಕೆ ನುಗ್ಗಿ ವಿವಿಧ ವಸ್ತು ಕದ್ದು ಪರಾರಿಯಾಗಿದ್ದ ಬಂಗ್ಲೆಗುಡ್ಡೆಯ ಶೇಖರ ಗಣಾಚಾರಿ ಅವರು ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದು, 9 ವರ್ಷದ ನಂತರ ಸಿಕ್ಕಿ ಬಿದ್ದಿದ್ದಾರೆ.
2016ರ ಡಿಸೆಂಬರ್ 24ರಂದು ಗೋಕರ್ಣದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಆ ಕಳ್ಳತನ ಮಾಡಿರುವುದು ಬಂಗ್ಲೆಗುಡ್ಡೆಯ ಶೇಖರ ಮಚ್ಚೇಂದ್ರ ಗಣಾಚಾರಿ ಎಂಬುದು ಗೊತ್ತಾಗಿತ್ತು. ಆರೋಪಿಯನ್ನು ಬಂಧಿಸಿದ ಪೊಲೀಸರು ನಿಯಮಾನುಸಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದ ಶೇಖರ ಗಣಾಚಾರಿ ಊರು ಬಿಟ್ಟು ಪರಾರಿಯಾಗಿದ್ದರು. ನ್ಯಾಯಾಲಯ ಸೂಚನೆ ನೀಡಿದರೂ ಶೇಖರ ಗಣಾಚಾರಿ ಹಾಜರಾಗಿರಲಿಲ್ಲ. ಜಾಮೀನು ವೇಳೆ ನೀಡಿದ ಭರವಸೆಯಂತೆ ನಡೆದುಕೊಂಡಿರಲಿಲ್ಲ.
ಈ ಬಗ್ಗೆ ಅರಿತ ಪಿಐ ಶ್ರೀಧರ ಎಸ್ ಆರ್ ಅವರು ವಿಶೇಷ ಕಾರ್ಯಾಚರಣೆ ನಡೆಸಿದರು. ಧಾರವಾಡದ ಕುಂದಗೋಳದಲ್ಲಿ ಶೇಖರ ಗಣಾಚಾರಿ ಅವರು ಅಡಗಿರುವುದನ್ನು ಪತ್ತೆ ಮಾಡಿದರು. ಅಲ್ಲಿನ ಯರಿಬೂದಿಹಾಳ ಗ್ರಾಮದಲ್ಲಿ ಮಾರುವೇಷದಲ್ಲಿದ್ದ ಶೇಖರ ಗಣಾಚಾರಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪಿಸೈ ಸುನೀಲ್ ಎಂ ಎ, ಅನಿಲ್ ಬಿ ಎಮ್, ಪೊಲೀಸ್ ಸಿಬ್ಬಂದಿ ರಾಜೇಶ ನಾಯ್ಕ, ಶ್ರೀಕಾಂತ ಕೆ, ಪರಮೇಶ್ವರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗಾ, ಬಬನ್ ಕದಂ ಅವರು ಈ ಕಾರ್ಯಾಚರಣೆಗೆ ಸಹಕಾರ ನೀಡಿದರು.