ಕಾರವಾರದಲ್ಲಿ ಕರ್ತವ್ಯ ನಿಭಾಯಿಸುವ ಪೊಲೀಸ್ ಸಿಬ್ಬಂದಿ ಸಂತೋಷ ನಾಯ್ಕ ಅವರು ತಮ್ಮ ಕುಟುಂಬವನ್ನು ಸರಿಯಾಗಿ ನೋಡಿಕೊಂಡಿಲ್ಲ. ಅವರು ಪತ್ನಿ ಶ್ರೇಯಾ ನಾಯ್ಕ ಅವರನ್ನು ಮನೆಯಿಂದ ಹೊರದಬ್ಬಿದ್ದು, ಆಘಾತದಿಂದ ಕುಸಿದುಬಿದ್ದ ಶ್ರೇಯಾ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ.
ಕಾರವಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಂತೋಷ ಆಪಾ ನಾಯ್ಕ ಅವರು ಕೆಲಸ ಮಾಡುತ್ತಿದ್ದಾರೆ. 51 ವರ್ಷದ ಅವರು ನಿವೃತ್ತ ಪೊಲೀಸ್ ಸಿಬ್ಬಂದಿ ಆಪಾ ಬೀರಪ್ಪ ನಾಯ್ಕ ಅವರ ಪುತ್ರರಾಗಿದ್ದಾರೆ. ಆಪಾ ನಾಯ್ಕ ಹಾಗೂ ಸಂತೋಷ ನಾಯ್ಕ ಎಂಬ ಅಪ್ಪ ಮಗ ಸೇರಿ ಶ್ರೇಯಾ ನಾಯ್ಕ ಅವರಿಗೆ ಹಿಂಸಿಸುತ್ತಿರುವ ಆರೋಪವ್ಯಕ್ತವಾಗಿದೆ. ಅವರಿಬ್ಬರ ವಿರುದ್ಧ ಈ ಹಿಂದೆಯೇ ಮಹಿಳೆಗೆ ತೊಂದರೆ ನೀಡಿದ ದೂರು ಬಂದಿದ್ದು, ಕೌಟುಂಬಿಕ ಕಲಹವನ್ನು ಅಲ್ಲಿಯೇ ಬಗೆಹರಿಸಿಕೊಳ್ಳುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಸಲಹೆ ನೀಡಿದ್ದರು.
ಅದಾದ ನಂತರ ಅವರ ಸಂಸಾರ ಸರಿಹೋಗಿದ್ದು, ನಂತರ ಮತ್ತೆ ಹಳೆಯ ಚಾಳಿಯೇ ಪುನವಾವರ್ತನೆಯಗಾಗಿದೆ. ಪೊಲೀಸ್ ಸಿಬ್ಬಂದಿ ಸಂತೋಷ ನಾಯ್ಕ ಅವರು ತಮ್ಮ ಪತ್ನಿ ಶ್ರೇಯಾ ನಾಯ್ಕ ಅವರನ್ನು ಮನೆಯಿಂದ ಹೊರದಬ್ಬಿದ್ದಾರೆ. ಅಪಾ ನಾಯ್ಕ ಅವರು ಶ್ರೇಯಾ ನಾಯ್ಕ ಅವರನ್ನು ಹೊರಗೆ ತಳ್ಳಿದ್ದಾರೆ. ಇದರಿಂದ ಶ್ರೇಯಾ ನಾಯ್ಕ ಅವರು ಮನೆ ಹೊರಗೆ ಕುಸಿದು ಬಿದ್ದಿದ್ದು, ಸಹಾಯಕ್ಕಾಗಿ ಮತ್ತೆ ಜನಶಕ್ತಿ ವೇದಿಕೆಯವರ ಮೊರೆ ಹೋಗಿದ್ದಾರೆ. ಹಳೆಯ ವಿಷಯವನ್ನು ಪ್ರಸ್ತಾಪಿಸಿ ಮಾಧವ ನಾಯಕ ಅವರು ಡಿವೈಎಸ್ಪಿ ಗಿರೀಶ್ ಅವರಿಗೆ ಫೋನ್ ಮಾಡಿ ವಿವರಿಸಿದ್ದಾರೆ.
ಅವರ ಸೂಚನೆ ಮೇರೆಗೆ ಶ್ರೇಯಾ ನಾಯ್ಕ ಅವರು ತಮಗಾದ ಅನ್ಯಾಯದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ನೀಡುವಾಗಲೂ ಶ್ರೇಯಾ ನಾಯ್ಕ ಅವರು ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಮತ್ತೆ ಕಿಮ್ಸ್’ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.