ಕುಮಟಾ ಪುರಸಭೆಯಲ್ಲಿ ಕೆಲಸ ಮಾಡುವ ದೀಪಕ ಶೆಟ್ಟಿ ಅವರಿಗೆ ಅದೇ ಕಚೇರಿಯಲ್ಲಿ ಕೆಲಸ ಮಾಡುವ ಶ್ರೀಧರ ಗೌಡ ಅವರು ಹೊಡೆದಿದ್ದಾರೆ. ಮೇಲಧಿಕಾರಿ ಸೂಚನೆ ಪಾಲಿಸಿದ ಕಾರಣ ದೀಪಕ ಶೆಟ್ಟಿ ಅವರಿಗೆ ಕೆಳ ಹಂತದ ನೌಕರನಿಂದ ಪೆಟ್ಟು ಬಿದ್ದಿದೆ.
ಶಿರಸಿಯ ದೀಪಕ ಮಂಜುನಾಥ ಶೆಟ್ಟಿ ಅವರು ಕುಮಟಾದ ಗುಜುರಿಗಲ್ಲಿಯಲ್ಲಿ ವಾಸವಾಗಿದ್ದಾರೆ. ಕುಮಟಾ ಪುರಸಭೆಯಲ್ಲಿ ದೀಪಕ ಶೆಟ್ಟಿ ಅವರು ಸೀನಿಯರ್ ಸುಪ್ರವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇಲಧಿಕಾರಿಗಳ ಸೂಚನೆಯನ್ನು ಅವರು ಅತ್ಯಂತ ನಿಷ್ಠೆಯಿಂದ ಪಾಲನೆ ಮಾಡಿಕೊಂಡು ಬರುತ್ತಿದ್ದು, ಸದ್ಯ ಅದೇ ಅವರ ಮೇಲಿನ ದಾಳಿಗೆ ಕಾರಣವಾಗಿದೆ. ಕುಮಟಾ ಪುರಸಭೆ ಮುಖ್ಯಾಧಿಕಾರಿ ಮಾತು ಪಾಲಿಸಿದ ಕಾರಣ ದೀಪಕ ಶೆಟ್ಟಿ ಅವರಿಗೆ ಆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಶ್ರೀಧರ ಗೌಡ ಅವರು ಹೊಡೆದಿದ್ದಾರೆ.
ಜುಲೈ 17ರಂದು ಪುರಸಭೆ ಗಿಬ್ ಟ್ಯಾಂಕ್ ಬಳಿ ಕೆಲ ವಸ್ತು ವಿಲೆ ಮಾಡಿದ ವಿಚಾರವಾಗಿ ನೌಕರರ ನಡುವೆ ಗೊಂದಲ ಉಂಟಾಗಿದೆ. ಈ ವಿಷಯ ಮುಖ್ಯಾಧಿಕಾರಿಗಳ ಗಮನಕ್ಕೆ ಬಂದಿದ್ದು, ಶ್ರೀಧರ ಗೌಡ ಅವರ ವಿರುದ್ಧ ದೂರು ನೀಡುವಂತೆ ಮುಖ್ಯಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ದೀಪಕ ಶೆಟ್ಟಿ ಅವರು ಆ ದೂರು ಟೈಪ್ ಮಾಡಿದ್ದಾರೆ. ಅದೇ ಸಿಟ್ಟಿಗೆ ಶ್ರೀಧರ ಗೌಡ ಅವರು ದೀಪಕ ಶೆಟ್ಟಿ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಜುಲೈ 18ರಂದು ದೀಪಕ ಶೆಟ್ಟಿ ಅವರು ಕಚೇರಿಯಲ್ಲಿದ್ದಾಗ ಶ್ರೀಧರ ಗೌಡ ಅವರು ಕೆಟ್ಟದಾಗಿ ಬೈದಿದ್ದಾರೆ. `ಮುಖ್ಯಾಧಿಕಾರಿ ಹೇಳಿದನ್ನೆಲ್ಲ ಕೇಳುತ್ತೀಯಾ?’ ಎಂದು ದಬಾಯಿಸಿದ್ದಾರೆ.
ಈ ಬಗ್ಗೆ ದೀಪಕ ಶೆಟ್ಟಿ ಅವರು ಮುಖ್ಯಾಧಿಕಾರಿಗಳ ಬಳಿ ದೂರು ನೀಡಲು ಹೋಗಿದ್ದು, ಅಲ್ಲಿಗೂ ಆಗಮಿಸಿದ ಶ್ರೀಧರ ಗೌಡ ಅವರು ದೀಪಕ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾರೆ. ತಲೆ, ಕೈ ಹಾಗೂ ಮೂಗಿಗೆ ಪೆಟ್ಟು ಬಿದ್ದ ಕಾರಣ ಆ ನೋವು ಸಹಿಸದ ದೀಪಕ ಶೆಟ್ಟಿ ಅವರು ಈ ವಿಷಯವನ್ನು ನ್ಯಾಯಾಲಯದವರೆಗೆ ಮುಟ್ಟಿಸಿದ್ದಾರೆ. ಕೋರ್ಟಿನ ಸೂಚನೆ ಮೇರೆಗೆ ಕುಮಟಾ ಪೊಲೀಸರು ಕೇಸು ದಾಖಲಿಸಿದ್ದಾರೆ.