ದನ ಕಾಯುವ ಕೆಲಸ ಮಾಡಿ ಜೀವನ ನಡೆಸುವ ದಾಂಡೇಲಿಯ ಅಪ್ಪು ಪಿಂಗಳೆ ಅವರು ಭಾನುವಾರ ಕರಡಿ ಜೊತೆ ಕುಸ್ತಿ ಹೊಡೆದಿದ್ದಾರೆ. ಏಕಾಏಕಿ ಆಕ್ರಮಣ ಮಾಡಿದ ಕರಡಿಯನ್ನು ಸೋಲಿಸಿ ಅವರು ಆಸ್ಪತ್ರೆ ಸೇರಿದ್ದಾರೆ.
Advertisement. Scroll to continue reading.
ದಾಂಡೇಲಿಯ ಪಣಸೋಲೆ ಸಮೀಪ ಭಾನುವಾರ ಸಂಜೆ ಎಮ್ಮೆ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. 34 ವರ್ಷದ ಅಪ್ಪು ಬೊಮ್ಮ ಪಿಂಗಳೆ ಅವರು ಕರಡಿ ದಾಳಿಗೆ ತತ್ತರಿಸಿದ್ದು, ನಿರಂತರ ಹೋರಾಟದ ಮೂಲಕ ಅವರು ಜೀವ ಉಳಿಸಿಕೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಅಡಗಿದ್ದ ಕರಡಿ ಏಕಾಏಕಿ ಮುಗಿ ಬಿದ್ದು, ಅಪ್ಪು ಪಿಂಗಳೆ ಅವರ ಬಲಬುಜ, ಸೊಂಟ ಹಾಗೂ ಬೆನ್ನಿನ ಭಾಗದಲ್ಲಿ ಗಾಯ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಪ್ಪು ಪಿಂಗಳೆ ಅವರು ಪ್ರತಿ ದಾಳಿ ಮಾಡಿ ಕರಡಿಯನ್ನು ಅಲ್ಲಿಂದ ಓಡಿಸಿದ್ದಾರೆ.
ಅದಾದ ನಂತರ ಅಪ್ಪು ಪಿಂಗಳೆ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದು, ಅಲ್ಲಿ ಜನ ಬಂದಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ಅರಿತು ಅರಣ್ಯ ಸಿಬ್ಬಂದಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿಪಡೆದು ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಪಣಸೋಲೆ ಸುತ್ತಮುತ್ತ ಕರಡಿ ಓಡಾಟ ಹೆಚ್ಚಿದ್ದು, ಮುನ್ನಚ್ಚರಿಕೆವಹಿಸುವುದು ಒಳಿತು.
Advertisement. Scroll to continue reading.