ಗರ್ಭಿಣಿಯೊಬ್ಬರ ಅಪಹರಣಕ್ಕೆ ಪ್ರಯತ್ನಿಸಿದ ಆರೋಪದ ಅಡಿ ಪೊಲೀಸರು 10 ಜನರ ವಿರುದ್ಧ ಕೇಸು ದಾಖಲಿಸಿದ್ದಾರೆ. ಸ್ವತಃ ಗರ್ಭಿಣಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರು ಸ್ವತಃ ತಮ್ಮ ತಂದೆ-ತಾಯಿ ವಿರುದ್ಧವೂ ಕಾನೂನು ಸಮರ ಸಾರಿದ್ದಾರೆ.
ಅಂಕೋಲಾ ತಾಲೂಕಿನ ಅಚವೆಯ ಕುಂಟಕಣಿಯಲ್ಲಿ ಸಿಂಧೂಶ್ರಿ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದರು. 26 ವರ್ಷದ ಅವರು ಸಂದೇಶ ನಾಯಕ ಎಂಬಾತರನ್ನು ಪ್ರೀತಿಸುತ್ತಿದ್ದು, ಪಾಲಕರ ವಿರೋಧದ ನಡುವೆಯೂ ಅವರನ್ನೇ ಮದುವೆ ಆಗಿದ್ದರು. ಅಂತರಜಾತಿ ವಿವಾಹವಾದ ಕಾರಣ ಕುಟುಂಬದವರು ಅವರ ವಿರುದ್ಧ ಸಿಡಿದೆದ್ದಿದ್ದರು. ಸಿಂಧೂಶ್ರೀ ಅವರಿಗೆ ಬೇರೆ ಮದುವೆ ಮಾಡುವ ಬಗ್ಗೆ ನಿರ್ಧರಿಸಿದ್ದರು. ಇದಕ್ಕಾಗಿ 10 ಜನ ಸೇರಿ ಅವರ ಅಪಹರಣ ಮಾಡಿ, ಗೃಹ ಬಂಧನದಲ್ಲಿರಿಸಿದ್ದು, ಅಪಹರಣದ ವೇಳೆ ಹಲ್ಲೆಯನ್ನು ಮಾಡಿದ ಬಗ್ಗೆ ಅವರು ಪೊಲೀಸರಲ್ಲಿ ದೂರಿದರು.
ವಿವಾಹದ ನಂತರ ಸಿಂಧೂಶ್ರೀ ಅವರು ಪತಿಯ ಮನೆಗೆ ಹೋಗಿದ್ದು, `ತಂದೆಗೆ ಹುಷಾರಿಲ್ಲ’ ಎಂದು ಸುಳ್ಳು ಹೇಳಿ ಕುಟುಂಬದವರು ಅವರನ್ನು ತವರುಮನೆಗೆ ಕರೆಯಿಸಿಕೊಂಡಿದ್ದರು. ಅಂಕೋಲಾ ಹೆಗ್ಗಾರಿನ ಪರಮೇಶ್ವರ ಜೋಶಿ ಅವರ ಜೊತೆ ಅಚವೆ ಅಂಗಡಿಬೈಲಿನ ಕೆ ಆರ್ ಸುರೇಶ ಹಾಗೂ ಸುಧಾ ಸುರೇಶ್ ದಂಪತಿ ಅಲ್ಲಿದ್ದರು. ಅವರು ಪ್ರಮೋದ, ಮಾರುತಿ ಘಟ್ಟಿ, ಕಿಟ್ಟಿ, ಮುದ್ದೆಪಾಲ್ ಗಣಪತಿ, ಗಣಪತಿ ನಾಗೇಂದ್ರ ಭಟ್ಟ ಹಾಗೂ ಮತ್ತಿಬ್ಬರು ಅಪರಿಚಿತರ ಜೊತೆ ಸೆಪ್ಟೆಂಬರ್ 9ರ ರಾತ್ರಿ ಸಿಂಧೂಶ್ರೀ ಅವರನ್ನು ಕಾರಿನಲ್ಲಿ ಕರೆದುಕೊಂಡು ಶಿರಸಿ ಕಡೆ ಹೊರಟರು. ವಡ್ಡಿ ಘಾಟ್ ಮಾರ್ಗವಾಗಿ ಕಾರು ಹೊರಟಿತು. ದೇವನಳ್ಳಿ ಬಳಿ ಸಿಂಧೂಶ್ರೀ ಅವರನ್ನು ಕಾರಿನಿಂದ ಒಮ್ಮೆ ಇಳಿಸಿದ್ದು, ನಂತರ ಅಲ್ಲಿಗೆ ಬಂದ ಎರಡು ಕಾರುಗಳ ಮೂಲಕ ಸಿಂಧೂಶ್ರೀ ಅವರ ಅಪಹರಣ ನಡೆಯಿತು. ಆರೋಪಿತರೆಲ್ಲರೂ ಸೇರಿ ಯಲ್ಲಾಪುರದಲ್ಲಿರುವ ಅವರ ಅಜ್ಜಿಮನೆಯಲ್ಲಿ ಗೃಹಬಂಧನದಲ್ಲಿರಿಸಿದರು. ಈ ವೇಳೆ ಸಿಂಧೂಶ್ರೀ ಅವರನ್ನು ಅಪಹರಣಕಾರರು ಥಳಿಸಿದ್ದು, ಈ ವೇಳೆ ಸಿಂಧೂಶ್ರೀ ಅವರು `ತಾನು ಗರ್ಭಿಣಿ’ ಎಂಬ ವಿಷಯವನ್ನು ಅವರು ಬಾಯ್ಬಿಟ್ಟರು.
Advertisement. Scroll to continue reading.
ಅದಾದ ನಂತರ `ಈ ಎಲ್ಲಾ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವೆ’ ಎಂದು ಆ 10 ಜನ ಬೆದರಿಸಿದ್ದು, ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಿಂಧೂಶ್ರೀ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಎಲ್ಲಾ ವಿಷಯ ಆಲಿಸಿ, ಅದರ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.