ಕಾರವಾರದ ಮಲ್ಲಾಪುರದಲ್ಲಿ ಹೋರಿ ದಾಳಿಗೆ ರಾಜೇಶ್ವರಿ ಪೆಟ್ರಿಕ್ ಎಂಬಾತರು ಸಾವನಪ್ಪಿದ್ದು, ಅದರ ಬೆನ್ನಲ್ಲೆ ಇಲ್ಲಿನ ಡುಮ್ಮಿಂಗ್ ರೋಡಿಗ್ರಿಸ್ ಅವರ ಮೇಲೆ ಹೋರಿ ಆಕ್ರಮಣ ನಡೆದಿದೆ. ಡುಮ್ಮಿಂಗ್ ರೋಡಿಗ್ರಿಸ್ ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
Advertisement. Scroll to continue reading.
ಮಲ್ಲಾಪುರದ ಕುಚೇಗಾರ್ ಗೋಪಾಲನಗರದಲ್ಲಿ ಡುಮ್ಮಿಂಗ್ ರೋಡಿಗ್ರಿಸ್ ಅವರು ವಾಸವಾಗಿದ್ದಾರೆ. ಭಾನುವಾರ ಅವರು ಸ್ಕೂಟಿಯಲ್ಲಿ ಹೋಗುವಾಗ ಹೋರಿಯೊಂದು ಅವರಿಗೆ ತಿವಿದಿದೆ. ಪರಿಣಾಮ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡುಮ್ಮಿಂಗ್ ರೋಡಿಗ್ರಿಸ್ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಲ್ಲಾಪುರದ ಸುಭದ್ರಾ ಹೊಟೇಲ್ ಬಳಿ ಹೋರಿಗಳ ಹೊಡೆದಾಟ ನಡೆದಿತ್ತು. ಎರಡು ಹೋರಿಗಳ ನಡುವೆ ನಡೆದ ಕಾಳಗದಲ್ಲಿ ನಡುವೆ ಸಿಲುಕಿ ರಾಜೇಶ್ವರಿ ಪೆಟ್ರಿಕ್ ಅವರು ಸಾವನಪ್ಪಿದ್ದರು. ಮಲ್ಲಾಪುರದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾದ ಬಗ್ಗೆ ಜನ ದೂರಿದ್ದರು. ಅಲ್ಲಿದ್ದ ಜಾನುವಾರುಗಳು ಆಕ್ರಮಣಕಾರಿಯಾಗಿದ್ದು, ಆಗಾಗ ಕಾದಾಟ ನಡೆಸುವುದು ಸಾಮಾನ್ಯವಾಗಿದ್ದರಿಂದ ಅವುಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದರು.
ಯುವತಿ ಸಾವಿನ ನಂತರವೂ ಆಡಳಿತ ವರ್ಗದವರು ಎಚ್ಚೆತ್ತುಕೊಳ್ಳದ ಕಾರಣ ಇನ್ನೊಂದು ಅನಾಹುತ ನಡೆದಿದೆ. ಮೀನು ಹಿಡಿಯಲು ಹೋಗಿದ್ದ ಡುಮ್ಮಿಂಗ್ ಮನೆಗೆ ಮರಳಿ ಗೋವಾಗೆ ಹೋಗಲು ಸಿದ್ಧವಾಗಿರುವಾಗ ಅವರ ಮೇಲೆ ಹೋರಿ ದಾಳಿ ನಡೆದಿದೆ. ಗೋವಾದಲ್ಲಿ ಸಂಬoಧಿಕರೊಬ್ಬರು ಸಾವನಪ್ಪಿದ ವಿಷಯ ಅರಿತು ಅಲ್ಲಿಗೆ ಹೊರಟಿದ್ದವರಿಗೆ ಈ ಅನಾಹುತ ಎದುರಾಗಿದೆ. ಏಕಾಏಕಿ ಹೋರಿಗಳ ಗುಂಪು ಮುನ್ನುಗ್ಗಿ ಬಂದಿದ್ದು, ಡುಮ್ಮಿಂಗ್ ಅವರು ಚಲಿಸುತ್ತಿದ್ದ ಸ್ಕೂಟಿಗೆ ಹೋರಿ ಗುದ್ದಿದೆ. ನೆಲಕ್ಕೆ ಬಿದ್ದ ಡುಮ್ಮಿಂಗ್ ಅವರ ಮೇಲೆ ಹೋರಿ ದಾಳಿ ಮಾಡಿದೆ. ಈ ವೇಳೆ ಡುಮ್ಮಿಂಗ್ ಅವರ ಜೊತೆ ಅವರ ಮಗ ಇದ್ದು, ಅವರು ಇನ್ನಷ್ಟು ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಅದಾಗಿಯೂ, ಡುಮ್ಮಿಂಗ್ ರೋಡಿಗ್ರಿಸ್ ಅವರ ತಲೆ, ಕೈ-ಕಾಲುಗಳಿಗೆ ನೋವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
Advertisement. Scroll to continue reading.