ಶಿವಮೊಗ್ಗದ ಸೊಸೈಟಿಯೊಂದರಲ್ಲಿ ಅಪರಾತಪರ ನಡೆಸಿದ ಸಿಇಓ ಮದನ್ ಊರು ಬಿಟ್ಟು ಪರಾರಿಯಾಗಿದ್ದು, ಅವರು ಭಟ್ಕಳದಲ್ಲಿ ಸಿಕ್ಕಿದ್ದಾರೆ. ತೀರ್ಥಹಳ್ಳಿ ಬಳಿಯ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅವರು ಕಾರು ಬಿಟ್ಟು ಕಣ್ಮರೆಯಾಗಿದ್ದು, ತೀವೃ ಶೋಧ ನಡೆಸಿದಾಗ ಅವರು ಸಿಕ್ಕಿಬಿದ್ದಿದ್ದಾರೆ.
Advertisement. Scroll to continue reading.
ಜಂಬಳ್ಳಿ ಕಾಡಿನಲ್ಲಿ ಭಾನುವಾರ ಅನುಮಾನಾಸ್ಪದ ಕಾರು ಕಾಣಿಸಿಕೊಂಡಿತ್ತು. ಆ ಕಾರಿನ ದಾಖಲೆ ಪರಿಶೀಲನೆ ಮಾಡಿದಾಗ ಅದು ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮದನ್ ಅವರದ್ದು ಎಂದು ಗೊತ್ತಾಗಿತ್ತು. ಆ ಕಾರಿನ ಕೀ ಜೊತೆ ಮೊಬೈಲ್, ಸೊಸೈಟಿಗೆ ಸೇರಿದ ಲೆಕ್ಕ ಪುಸ್ತಕಗಳು ಪತ್ತೆಯಾಗಿದ್ದವು. ಕುಡುಮಲ್ಲಿಗೆ ಸೊಸೈಟಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಆರ್ಥಿಕ ಅವ್ಯವಹಾರಗಳು ನಡೆದಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆ ದೂರಿನ ಬೆನ್ನಲ್ಲೆ ಸಿಇಓ ಮದನ್ ನಾಪತ್ತೆ ಆಗಿರುವುದು ಅನುಮಾನಗಳಿಗೆ ಕಾರಣವಾಗಿತ್ತು.
ಮದನ್ ಅವರು ಶುಕ್ರವಾರದಂದು ತೀರ್ಥಹಳ್ಳಿಯಲ್ಲಿರುವ ತಮ್ಮ ನಿವಾಸದಿಂದ ಹೊರಬಂದಿದ್ದರು. ಆದರೆ, ಅವರ ಕಾರು ನಿರ್ಜನ ಅರಣ್ಯ ಪ್ರದೇಶದಲ್ಲಿ ದಿಢೀರ್ ಪತ್ತೆಯಾಗಿದ್ದು, ಅವರು ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಯಾವುದೇ ನಿಖರ ಸುಳಿವು ಲಭ್ಯವಾಗಿರಲಿಲ್ಲ. ಕಾರು ಪತ್ತೆಯಾದ ಜಂಬಳ್ಳಿ ಅರಣ್ಯ ಪ್ರದೇಶದಲ್ಲಿ ಮದನ್ ಅವರ ಕುಟುಂಬಸ್ಥರು, ಸ್ಥಳೀಯರು ಹಾಗೂ ಸಾರ್ವಜನಿಕರು ಆತಂಕದಿoದ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು. ಸೊಸೈಟಿಯಲ್ಲಿನ ಭ್ರಷ್ಟಾಚಾರದ ದೂರು ದಾಖಲಾದ ಹಿನ್ನೆಲೆಯಲ್ಲಿ ಕಾನೂನು ಕ್ರಮದ ಭೀತಿಯಿಂದ ಅವರು ತಲೆಮರೆಸಿಕೊಂಡಿದ್ದಾರೆಯೇ? ಎಂದು ಹುಡುಕಾಟ ನಡೆದಿತ್ತು. ಮಾನಸಿಕ ಒತ್ತಡಕ್ಕೆ ಸಿಲುಕಿ ಏನಾದರೂ ಅನಾಹುತ ಮಾಡಿಕೊಂಡಿದ್ದಾರಾ? ಎಂಬ ಪ್ರಶ್ನೆಯೂ ಜನರನ್ನು ಕಾಡಿತ್ತು.
Advertisement. Scroll to continue reading.
ಈ ಎಲ್ಲಾ ಪ್ರಶ್ನೆಗೆ ಉತ್ತರ ಎಂಬoತೆ ಸೋಮವಾರ ಭಟ್ಕಳದಲ್ಲಿ ಮದನ್ ಅವರು ಪ್ರತ್ಯಕ್ಷರಾಗಿದ್ದಾರೆ. ಮದನ್ ಅವರ ಕುಟುಂಬದವರ ಜೊತೆ ಪೊಲೀಸರು ಬಂದು ಅವರನ್ನು ಊರಿಗೆ ಕರೆದೊಯ್ದಿದ್ದಾರೆ. ಕಾಡಿನಲ್ಲಿ ಕಾರು, ಮೊಬೈಲ್ ಮತ್ತು ದಾಖಲೆಗಳನ್ನು ಬಿಟ್ಟು ಅವರು ಭಟ್ಕಳ ತಲುಪಿದ್ದು ಹೇಗೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಾರನ್ನು ಕಾಡಿನಲ್ಲಿ ಬಿಟ್ಟು ಮದನ್ ಒಬ್ಬರೇ ಭಟ್ಕಳಕ್ಕೆ ತೆರಳಿದ್ದರೇ? ಮಾರ್ಗಮಧ್ಯೆ ಯಾರಾದರೂ ಅವರಿಗೆ ನೆರವು ನೀಡಿದ್ದರೇ? ಅಥವಾ ನಾಪತ್ತೆಯಾದ ಅವಧಿಯಲ್ಲಿ ಬೇರೆ ಏನಾದರೂ ಬೆಳವಣಿಗೆಗಳಾಗಿದೆಯೇ? ಎಂಬುದು ನಿಗೂಢವಾಗಿಯೇ ಉಳಿದಿದೆ. ಭಟ್ಕಳಕ್ಕೂ ಮದನ್ ಅವರಿಗೂ ಇರುವ ಸಂಪರ್ಕವೇನು? ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.