ಗಾಂಜಾ ಮಾರಾಟ ಮಾಡುವುದಕ್ಕಾಗಿ ಹೊನ್ನಾವರಕ್ಕೆ ಬಂದಿದ್ದ ಭಟ್ಕಳದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಆ ವೇಳೆ ಆ ವ್ಯಕ್ತಿ ಬಳಿ 5 ಸಾವಿರ ರೂ ಮೌಲ್ಯದ ಗಾಂಜಾ ಹಾಗೂ 160ರೂ ಹಣ ಸಿಕ್ಕಿದೆ.
ಹೊನ್ನಾವರಧ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಭಟ್ಕಳ ಮೂಲದ ಯುವಕನನ್ನು ಬಂಧಿಸಿರುವ ಹೊನ್ನಾವರ ಪೊಲೀಸರು ಗಾಂಜಾ ಪೂರೈಸಿದ ಆರೋಪದಲ್ಲಿ ಭಟ್ಕಳ ಮೂಲದ ಇನ್ನೊಬ್ಬನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೆ 8ರಂದು ಮಧ್ಯಾಹ್ನ ಕಾಸರಕೋಡ ರೋಷನ್ ಮೊಹಲ್ಲಾದ ಶ್ಯಾನಭಾಗ ರೆಸಿಡೆನ್ಸಿ ಬಸ್ ತಂಗುದಾಣದ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಭಟ್ಕಳದ ಹೆಬಳೆ ಫಿರ್ದೋಸ ನಗರದ ಅಬ್ರಾರ್ ತಂದೆ ಮೋಹಿದ್ದಿನ್ ಶೇಖ್ (24) ಅವರು ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿ ಸಿಕ್ಕಿ ಬಿದ್ದರು. ದಾಳಿಯ ವೇಳೆ ಆತನ ಬಳಿಯಿಂದ 112.61 ಗ್ರಾಂ ಗಾಂಜಾ, 160 ನಗದು ಹಾಗೂ ಕಪ್ಪು-ನೀಲಿ ಬಣ್ಣದ ಹ್ಯಾಂಡ್ಬ್ಯಾಗ್ ವಶಪಡಿಸಿಕೊಂಡರು.
ಪ್ರಾಥಮಿಕ ವಿಚಾರಣೆಯಲ್ಲಿ ಫೈಜಾನ್ ಎಂಬಾತ ಗಾಂಜಾವನ್ನು ಮಾರಾಟಕ್ಕಾಗಿ ನೀಡಿದ್ದಾಗಿ ಅಬ್ರಾರ್ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅಬ್ರಾರ್ ಹಾಗೂ ಫೈಜಾನ್ ವಿರುದ್ಧ ಹೊನ್ನಾವರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇದೇ ದಿನ ಸಂಜೆ ಕಾಸರಕೋಡ ಇಕೋ ಬೀಚ್ ಕ್ರಾಸ್ ಸಮೀಪ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಡಿ ಭಟ್ಕಳದ ಹೆಬಳೆ ಫಿರ್ದೋಸ ನಗರದ ಸೈಯದ್ ಹುಸೇನ್ ತಂದೆ ಸೈಯದ್ ರೆಹಮತುಲ್ಲಾ (22) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಹೊನ್ನಾವರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಮಂಜುನಾಥ್ ಅವರು ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ.
Advertisement. Scroll to continue reading.