ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕುರುಹುಗಳನ್ನು ದಾಖಲಿಸುವ ಚಲನಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಮೂರು ಕಾಲಘಟ್ಟದ ಜನಜೀವನದ ಆಧಾರದಲ್ಲಿ `ಕಾನ್ಧ್ದಾರಿ’ ಎಂಬ ಚಿತ್ರ ಸಿದ್ಧವಾಗಿದೆ.
ಕನ್ನಡ ಭಾಷೆ, ಪ್ರಾದೇಶಿಕ ಜನ-ಜೀವನ, ಕಲೆ, ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳ ಸಂಖ್ಯೆ ಈಚೆಗೆ ಟ್ರೆಂಡಿoಗ್’ನಲ್ಲಿದೆ. ದಕ್ಷಿಣ ಕನ್ನಡ ಭಾಗದ ಹಿನ್ನೆಲೆಯ ಕಾಂತಾರ, ಕರಾವಳಿ – ಮಲೆನಾಡಿನ ವಲವಾರ ಹಾಗೂ ಉತ್ತರ ಕರ್ನಾಟಕ ಭಾಗದ ಪಪ್ಪಿ ಮತ್ತು ಹೆಬ್ಬುಲಿ ಕಟ್ ಎಂಬ ಸಿನಿಮಾದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯ ಆಚಾರ-ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ ಶೂಟಿಂಗ್ ಮುಗಿಸಿದೆ. 1802ರಿಂದ 2026ವರೆಗಿನ ಮೂರು ಕಾಲಘಟ್ಟಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ವಿನಾಯಕ ಹೆಗಡೆ ಬೊಮ್ಮನಹಳ್ಳಿ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಇದೇ 18ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಹಿರಿಯ ನಟ ದೊಡ್ಡಣ್ಣ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಮಾಡಿರುವ ದೊಡ್ಡಣ್ಣ ಅವರು ಈ ವೇಳೆ ಉತ್ತರ ಕನ್ನಡ ಜಿಲ್ಲೆಯ ನಂಟಿನ ಬಗ್ಗೆ ಮೆಲುಕು ಹಾಕಿದ್ದಾರೆ.
`ಒಂದು ಮುತ್ತಿನ ಕಥೆ’ ಶೂಟಿಂಗ್ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೋಗಿದ್ದೆ. ಅಲ್ಲಿನ ಜನರ ಜೀವನ, ಗುಣ, ಸಂಸ್ಕೃತಿ ಕಂಡು ಖುಷಿಯಾಗಿತ್ತು. ಕಾನ್ಧಾರಿ ಟ್ರೇಲರ್ ನೋಡಿದಾಗ ಮತ್ತೆ ಹೋಗಬೇಕು ಅಂತನಿಸುತ್ತಿದೆ. ಪ್ರಕೃತಿ ಅಂದರೆ ತಾಯಿ. ತಾಯಿಯನ್ನು ಉಳಿಸುವುದು ಎಲ್ಲರ ಹೊಣೆ. ಇಲ್ಲದಿದ್ದರೆ ಮುಂದಿನ ಜನಾಂಗದವರು ಶಾಪ ಹಾಕುತ್ತಾರೆ. ಪರಿಸರವನ್ನು ನಾಶ ಮಾಡಬೇಡಿ’ ಎಂದು ದೊಡ್ಡಣ್ಣ ಅವರು ಕರೆ ನೀಡಿದ್ದಾರೆ.