ಕಾರವಾರದ ಪ್ರಣೀತ ಶೇಜವಾಡಕರ್ ಅವರು ಕಾಜುಭಾಗದ ರೋಹನ್ ರಾಯ್ಕರ್ ಅವರಿಂದ ಮೀಟರ್ ಬಡ್ಡಿ ಲೆಕ್ಕಾಚಾರದಲ್ಲಿ ಸಾಲಪಡೆದು ಸಂಕಷ್ಟಕ್ಕೆ ಸಿಲುಕಿದ್ದಾರೆ. 12 ಲಕ್ಷ ರೂ ಸಾಲ ಮಾಡಿದ್ದ ಪ್ರಣೀತ ಶೇಜವಾಡಕರ್ ಅವರು ಈವರೆಗೆ 26 ಲಕ್ಷ ರೂ ಪಾವತಿ ಮಾಡಿದರೂ ಅವರ ಅಸಲು ಮಾತ್ರ ಹಾಗೇ ಇದೆ!
ಕಾರವಾರದ ಶೇಜವಾಡದಲ್ಲಿ ಪ್ರಣೀತ ದಿಗಂಬರ್ ಶೇಜವಾಡಕರ್ ಅವರು ವಾಸವಾಗಿದ್ದಾರೆ. 43 ವರ್ಷದ ಅವರು ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡಿಕೊಂಡಿದ್ದಾರೆ. ತುರ್ತು ಹಣದ ಅಗತ್ಯವಿದ್ದ ಕಾರಣ ಅವರು ಕಾಜುಭಾಗದ ರೋಹನ್ ನರಸಿಂಹ ರಾಯ್ಕರ್ ಅವರಲ್ಲಿ ಸಹಾಯ ಕೇಳಿದ್ದಾರೆ. 2024ರ ಅಗಸ್ಟಿನಲ್ಲಿ ಮೊದಲ ಬಾರಿ ಪ್ರಣೀತ ಅವರು 1 ಲಕ್ಷ ರೂ ಸಾಲ ಕೇಳಿದ್ದು, ಆ ವೇಳೆ ಬಡ್ಡಿ ಮೊತ್ತ 10 ಸಾವಿರ ರೂ ಮುರಿದುಕೊಂಡು ರೋಹನ್ ಅವರು ಸಾಲ ನೀಡಿದ್ದಾರೆ. ಅದಾದ ನಂತರ ಪ್ರಣೀತ ಶೇಜವಾಡಕರ್ ಅವರು 12.28ಲಕ್ಷ ರೂ ಸಾಲಪಡೆದಿದ್ದಾರೆ. ಅದರಂತೆ, ಆಗಾಗ ಕಂತು ಪಾವತಿಸುತ್ತ ಬಂದಿದ್ದಾರೆ. ಸಾಲಪಡೆಯುವಾಗ ರೋಹನ್ ರಾಯ್ಕರ್ ಅವರು ಬೇರೆಯವರ ಹೆಸರಿಗೆ ಕರಾರು ಪತ್ರ ಮಾಡಿಕೊಂಡಿದ್ದು, ರೋಹನ್ ರಾಯ್ಕರ್ ಅವರು ಸೂಚಿಸಿದವರ ಹೆಸರಿಗೆ ಪ್ರಣೀತ ಶೇಜವಾಡಕರ್ ಅವರು ಹಣ ಪಾವತಿ ಮಾಡಿದ್ದಾರೆ. ಈವರೆಗೆ 26ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪ್ರಣೀತ ಶೇಜವಾಡಕರ್ ಅವರು ಪಾವತಿಸಿದ್ದಾರೆ. ಆದರೂ, ಅವರ ಸಾಲ ಮಾತ್ರ ತೀರಿಲ್ಲ!
ಕಾರವಾರದ ಕಾಜುಬಾಗ್ ನಿವಾಸಿ ರೋಹನ್ ನರಸಿಂಹ ರಾಯ್ಕರ್ ಅವರು ಪಿಕಳೆ ರಸ್ತೆಯ ನಿವಾಸಿಗಳಾದ ಸುನೀಲ್ ಸದಾನಂದ ಕಲ್ಗುಟುಕರ್ ಹಾಗೂ ಸಂಪದಾ ಸುನೀಲ್ ಕಲ್ಗುಟುಕರ್ ಅವರ ಹೆಸರಿಗೆ ಕರಾರು ಪತ್ರ ಮಾಡಿಕೊಂಡಿದ್ದು, ಪ್ರಣೀತ ಶೇಜವಾಡಕರ್ ಅವರು ಹಣ ಪಾವತಿಸಿದ ನಂತರವೂ ಹಿಂಸೆ ನೀಡುತ್ತಿದ್ದಾರೆ `ಸಾಲಕ್ಕೆ ಭದ್ರತೆಯಾಗಿ ಆರೋಪಿ ಸಂಪದಾ ಮತ್ತು ಸುನೀಲ್ ಹೆಸರಿನಲ್ಲಿ ಕರಾರು ಪತ್ರಗಳನ್ನು ಬರೆಸಿಕೊಳ್ಳಲಾಗಿತ್ತು. ಜೊತೆಗೆ ಯೂನಿಯನ್ ಬ್ಯಾಂಕ್ನ ಮೂರು ಖಾಲಿ ಚೆಕ್ಗಳನ್ನು ಸಹಿ ಮಾಡಿಸಿಕೊಂಡು ಪಡೆಯಲಾಗಿತ್ತು. 2024ರ ಆಗಸ್ಟ್ 8 ರಿಂದ 2026ರ ಸೆಪ್ಟೆಂಬರ್ 1 ರವರೆಗೆ ಫಿರ್ಯಾದಿ ಪ್ರಣೀತ್ ಅವರು ಪೋನ್ಪೇ ಹಾಗೂ ನಗದು ರೂಪದಲ್ಲಿ 26ಲಕ್ಷ ರೂಪಾಯಿ ಪಾವತಿಸಿದರೂ ತೊಂದರೆ ನೀಡುತ್ತಿದ್ದಾರೆ’ ಎಂದು ಪ್ರಣೀತ ಅವರು ದೂರಿದ್ದಾರೆ. `ಬ್ಯಾಂಕ್ ಬಡ್ಡಿ ದರಕ್ಕಿಂತ ಅತಿ ಹೆಚ್ಚಿನ ಮೊತ್ತ ಹಾಗೂ ಪಡೆದ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ನೀಡಿದ್ದರೂ ಆರೋಪಿತರು ಕರಾರು ಪತ್ರ ರದ್ದುಪಡಿಸಲು ಮತ್ತು ಖಾಲಿ ಚೆಕ್ಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಹಣ ಮರಳಿಸಿದ ಬಳಿಕ ಚೆಕ್ ಕೇಳಲು ಹೋದಾಗ ಆರೋಪಿ ಸುನೀಲ್ ಕಲ್ಗುಟುಕರ್ ಅವರು `ನಿನಗೆ ಯಾಕೆ ಚೆಕ್ ಮತ್ತು ಕರಾರು ಪತ್ರ ನೀಡಬೇಕು? ಇನ್ನು ಬಡ್ಡಿ ಹಣ ನೀಡದಿದ್ದರೆ ನನ್ನ ಸರ್ವಿಸ್ ರಿವಾಲ್ವರ್ನಿಂದ ಶೂಟ್ ಮಾಡುತ್ತೇನೆ’ ಎಂದು ಹೆದರಿಸಿದ ಬಗ್ಗೆ ಆತಂಕವ್ಯಕ್ತಪಡಿಸಿದ್ದಾರೆ. `ಮುಂಬೈನಿಂದ ರೌಡಿಗಳನ್ನು ಕರೆಸಿ ನಿನ್ನನ್ನು ಸಾಯಿಸುತ್ತೇನೆ’ ಎಂದು ಬೆದರಿಸಿದ ಬಗ್ಗೆಯೂ ಪ್ರಣೀತ ಅವರು ದೂರಿದ್ದಾರೆ.
ಇದರೊಂದಿಗೆ `ಆರೋಪಿತರು ಜೆಸಿಬಿ ತಂದು ನಿನ್ನ ಮನೆಯನ್ನು ಒಡೆದುಹಾಕುತ್ತೇನೆ’ ಎಂದಿದ್ದಾರೆ. ಪ್ರಣೀತ ಅವರ ಪತ್ನಿಗೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಭದ್ರತೆಗೆ ನೀಡಿದ ಚೆಕ್ ದುರುಪಯೋಗಪಡಿಸಿಕೊಂಡಿದ್ದಾರೆ. ಸದ್ಯ ನ್ಯಾಯಕ್ಕಾಗಿ ಪ್ರಣೀತ ಅವರು ಪೊಲೀಸರ ಮೊರೆ ಹೋಗಿದ್ದಾರೆ.