ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ನಿಧಿಯಿಂದ ಮಂಜೂರಾಗಿದ್ದ ಕಾಮಗಾರಿ ಮಾಡದೇ ಕಾಸು ಹೊಡೆದಿದ್ದ ಕುಮಟಾದ ಮಹಿಳಾ ಅಧಿಕಾರಿಗಳಿಬ್ಬರು ಅಮಾನತು ಆಗಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿoಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಲ್ಪನಾ ವಾಗ್ಮೋರೆ ಹಾಗೂ ಕಿರಿಯ ಇಂಜಿನಿಯರ್ ಅಂಜಲಿ ಪಾಟೀಲ್ ಅವರ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಿದೆ.
Advertisement. Scroll to continue reading.
ಮಂಜೂರಾದ ಕೆಲಸ ಮಾಡದೇ ನಕಲಿ ಫೋಟೋ ಸೃಷ್ಠಿಸಿದ ಈ ಮಹಿಳೆಯರಿಬ್ಬರ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿ ವರದಿ ನೀಡಿದ್ದು, ಆ ವರದಿ ಅನ್ವಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ. 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ನಿಧಿಯಡಿ ಕುಮಟಾ ತಾಲೂಕಿನ ಕಲ್ಲಬ್ಬೆ ಪಂಚಾಯತ್ ವ್ಯಾಪ್ತಿಯಲ್ಲಿ 25 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ದಿಗೆ ಅನುಧಾನ ಬಿಡುಗಡೆಯಾಗಿತ್ತು. ಆ ಕಾಮಗಾರಿ ಮುಗಿಸದೇ ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿಸಿದ್ದರು. ಮಾರ್ಚ ಅವಧಿಯಲ್ಲಿ ತರಾತುರಿಯಲ್ಲಿ ಹಣ ಖರ್ಚು ಮಾಡಿರುವುದು ಗಮನಕ್ಕೆ ಬಂದಿತ್ತು. ಶಾಸಕ ದಿನಕರ ಶೆಟ್ಟಿ ಅವರೇ ಈ ಬಗ್ಗೆ ದೂರು ನೀಡಿದ್ದರು.
ಆರೋಪದ ಮೇಲೆ ತನಿಖೆ ನಡೆಸಿದ ಅಧಿಕಾರಿಗಳಿಗೆ ಸಾಮಾಗ್ರಿಗಳ ಗುಣಮಟ್ಟ ಪರೀಕ್ಷಾ ವರದಿ ಸ್ವೀಕೃತ ಮಾಡದೆಯೇ ಬಿಲ್ ಪಾವತಿ ಮಾಡಿರುವುದು ಗಮನಕ್ಕೆ ಬಂದಿತ್ತು. ಅಲ್ಲದೇ ಕಾಮಗಾರಿಯ ಮೂಲ ಅಂದಾಜು ಪಟ್ಟಿಯಲ್ಲಿದ್ದ ಪೋಟೋಗಳಿಗೂ ಬಿಲ್ ದಾಖಲಿಸುವಾಗ ನೀಡಿದ ಫೋಟೋಗಳಿಗೂ ವ್ಯತ್ಯಾಸಗಳಿರುವುದನ್ನು ತನಿಖಾಧಿಕಾರಿಗಳು ಗಮನಿಸಿದ್ದರು. ನಕಲಿ ಫೋಟೋಗಳನ್ನ ಹಾಕಿ ದಾಖಲೆ ಸೃಷ್ಟಿ ಮಾಡಿರುವುದನ್ನ ಅಧಿಕಾರಿಗಳು ತನಿಖೆಯಲ್ಲಿ ತಿಳಿಸಿದ್ದರು. ಅಲ್ಲದೇ ಕಲ್ಲಬ್ಬೆ ಪಂಚಾಯತ್ ವ್ಯಾಪ್ತಿಯ ಕೆಲಸದ ಅಳತೆಯನ್ನು ರಾಘವೇಂದ್ರ ನಾಯ್ಕ ಎನ್ನುವ ಅಧಿಕಾರಿ ಮಾಡಬೇಕಿತ್ತು. ಅದರ ಬದಲು ಕಿರಿಯ ಇಂಜಿನಿಯರ್ ಆಗಿದ್ದ ಅಂಜಲಿ ಪಾಟೀಲ್ ಮಾಡಿರುವುದು ಧೃಡವಾಗಿತ್ತು.
Advertisement. Scroll to continue reading.
ಈ ಎಲ್ಲಾ ಹಿನ್ನಲೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಲ್ಪನಾ ವಾಗ್ಮೋರೆ ಹಾಗೂ ಕಿರಿಯ ಇಂಜಿನಿಯರ್ ಆಗಿರುವ ಅಂಜಲಿ ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಪಂಚಾಯತ್ ಇಂಜಿನಿರಿoಗ್ ವಿಭಾಗದ ಹಿರಿಯ ಅಧಿಕಾರಿಗಳ ಲೋಪದ ಬಗ್ಗೆಯೂ ಆರೋಪವಿದ್ದು, ಆ ಬಗ್ಗೆಯೂ ವಿಚಾರಣೆ ನಡೆದಿದೆ.