ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರವೂ ಸಾರ್ವಜನಿಕರ ಸೇವೆಗಾಗಿ ಶ್ರಮಿಸುತ್ತಿದ್ದ ಅಂಕೋಲಾ ಅವರ್ಸಾದ ಕೃಷ್ಣನಂದ್ ರಾಮನಾಥನ್ ಅವರು ನಿಧನರಾಗಿದ್ದಾರೆ. ಅವರ ಅಗಲುವಿಕೆಯ ಸುದ್ದಿ ಕೇಳಿ ಅನೇಕರು ಕಂಬನಿ ಮಿಡಿದಿದ್ದಾರೆ.
ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಕೃಷ್ಣಾನಂದ ಲಕ್ಷ್ಮಣ್ ರಾಮನಾಥನ್ ಅವರು ವಾಸವಾಗಿದ್ದರು. ವಯಸ್ಸು 72 ಆಗಿದ್ದರೂ ಅವರು ಲವಲವಿಕೆಯಿಂದ ಇದ್ದರು. ಜನಪಯೋಗಿ ಕೆಲಸಗಳಿಗೆ ಹೆಚ್ಚಿನ ಸಮಯ ನೀಡುತ್ತಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ `ಕಿಟ್ಟಾ’ ಎಂದು ಕರೆಯುತ್ತಿದ್ದರು. ಶಿಕ್ಷಕರಾಗಿ, ನಾಟಕ ಕಲಾವಿದರಾಗಿ, ಗ್ರಾಮ ಲೆಕ್ಕಾಧಿಕಾರಿಯಾಗಿ ಬಹುಮುಖ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದ ಅವರು ಈ ದಿನ ಹೃದಯಘಾತದಿಂದ ಉಸಿರಾಟ ನಿಲ್ಲಿಸಿದರು.
ಕೃಷ್ಣನಂದ್ ರಾಮನಾಥನ್ ಅವರು ಎಂ ಎ ಪದವಿಧರರಾಗಿದ್ದರು. ವ್ಯಾಸಂಗ ಮುಗಿಸಿದ ನಂತರ ಸ್ಟೆಪೆಂಡರಿ ಶಿಕ್ಷಕರಾಗಿ ವೃತ್ತಿ ಶುರು ಮಾಡಿದ್ದರು. ಅದಾದ ನಂತರ ಅವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದ್ದು, ಕುಮಟಾ, ಅಂಕೋಲಾದ ಅನೇಕ ಕಡೆ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಕೊನೆಯದಾಗಿ ಬೆಲಿಕೇರಿ ಭಾಗದಲ್ಲಿ ಅವರು ನಿವೃತ್ತರಾಗಿದ್ದರು. ಸರ್ಕಾರಿ ಸೇವೆಯಲ್ಲಿರುವಾಗ ಜನರ ಮನಗೆದ್ದ ಅವರು ನಿವೃತ್ತಿ ನಂತರವೂ ಅದೇ ಬಗೆಯ ಅನ್ಯೋನ್ಯತೆ ಉಳಿಸಿಕೊಂಡಿದ್ದರು. ನಗುಮುಖದ ವ್ಯಕ್ತಿತ್ವ, ಸರಳ ಸ್ವಭಾವ ಹಾಗೂ ಆತ್ಮೀಯವಾದ ಮಾತುಗಳಿಂದ ಜನರ ಮನಗೆದ್ದಿದ್ದರು.
ಕೃಷ್ಣನಂದ್ ರಾಮನಾಥನ್ ಅವರ ನಿಧನದ ಸುದ್ದಿ ಕೇಳಿ ಅನೇಕರು ಅವರ್ಸಾಗೆ ಆಗಮಿಸಿದ್ದಾರೆ. ಕೃಷ್ಣನಂದ್ ರಾಮನಾಥನ್ ಅವರ ಅಂತಿಮ ದರ್ಶನಪಡೆದು ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಕೃಷ್ಣನಂದ್ ರಾಮನಾಥನ್ ಅವರ ನಿಧನಕ್ಕೆ ರಾಜೇಶ್ ರಾಮನಾಥನ್, ಸಂದೀಪ್ ರಾಮನಾಥನ್, ವಿನೋದ್ ಆರ್ ನಾಯ್ಕ್, ಉಮೇಶ್ ಆರ್ ನಾಯ್ಕ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಾರುತಿ ಬಿ ನಾಯಕ, ಸ್ವಾತಿ ಎಮ್ ನಾಯಕ, ಉರಗತಜ್ಞ ಮಹೇಶ್ ಬಿ ನಾಯಕ, ಮಂಜುನಾಥ್ ನಾಯಕ, ಶ್ರೀಧರ್ ನಾಯಕ, ಮಧುಕೇಶ್ವರ್ ನಾಯಕ, ನಿತ್ಯಾನಂದ ಆರ್ ನಾಯ್ಕ್ ಹಟ್ಟೆಕೇರಿ, ಶಾಸಕ ಸತೀಶ್ ಸೈಲ್ ಅವರು ಕಂಬನಿ ಮಿಡಿದಿದ್ದಾರೆ.