ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಿದ ಘಟಾನುಘಟಿ ನಾಯಕರು ಈ ಊರಿನಲ್ಲಿಯೇ ಇದ್ದರೂ ಡಿ ಕೆ ಶಿವಕುಮಾರ ಅವರ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ನಾಯಕತ್ವ ಕೊಟ್ಟಿಲ್ಲ. ಉತ್ತರ ಕನ್ನಡ ಜಿಲ್ಲೆಯ ಊರುಗಳ ಬಗ್ಗೆಯೂ ಸರಿಯಾಗಿ ಅರಿವಿಲ್ಲದ ಯು ಟಿ ಖಾದರ್ ಅವರನ್ನು ಈ ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಿಸಿದೆ.
ಯು ಟಿ ಖಾದರ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ತಾತ್ಕಾಲಿಕ ಉಸ್ತುವಾರಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸುವ ಜವಾಬ್ದಾರಿವಹಿಸಿ ಯು ಟಿ ಖಾದರ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಆದರೆ, ಯು ಟಿ ಖಾದರ್ ಅವರು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಪರಿಚಿತರಲ್ಲ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಸಹ ಯು ಟಿ ಖಾದರ್ ಅವರ ಜೊತೆ ನೇರ ಒಡನಾಟವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶ, ಪೃಕೃತಿ ವಿಕೋಪ ತಾಣಗಳ ಬಗ್ಗೆಯೂ ಯು ಟಿ ಖಾದರ್ ಅವರು ಅಧ್ಯಯನ ನಡೆಸಿದವರಲ್ಲ. ಇಲ್ಲಿನ ಜನಪ್ರತಿನಿಧಿಗಳ ಹಾಗೇ ಅವರು ಈ ಕ್ಷೇತ್ರದಲ್ಲಿ ಓಡಾಟ ಮಾಡಿದವರು ಸಹ ಅಲ್ಲ. ಅದಾಗಿಯೂ, ಕರಾವಳಿ-ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ವಿಕೋಪ ತಡೆಗಾಗಿ ಯು ಟಿ ಖಾದರ್ ಅವರನ್ನು ಸರ್ಕಾರ ಉಸ್ತುವಾರಿಯನ್ನಾಗಿ ನೇಮಿಸಿದೆ!
ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್, ಭಟ್ಕಳ ವಿಧಾನಸಭಾ ಕ್ಷೇತ್ರದ ಮಂಕಾಳು ವೈದ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಆಳ-ಅಗಲದ ಬಗ್ಗೆ ಅರಿತಿದ್ದಾರೆ. ಈ ಮೂವರು ಸದ್ಯ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಉಸ್ತುವಾರಿ ಸಚಿವ ಸ್ಥಾನವನ್ನು ಸಮರ್ಥವಾಗಿ ಎದುರಿಸುವ ತಾಕತ್ತುಹೊಂದಿದ್ದಾರೆ. ಅದರಲ್ಲಿಯೂ, ಮಂಕಾಳು ವೈದ್ಯ ಹಾಗೂ ಆರ್ ವಿ ದೇಶಪಾಂಡೆ ಅವರು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅವರಿಬ್ಬರಿಗೂ ಸಚಿವ ಸ್ಥಾನ ಕೊಡದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ನೆರೆ ಜಿಲ್ಲೆಯ ಯು ಟಿ ಖಾದರ್ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಯು ಟಿ ಖಾದರ್ ಅವರಿಗೆ ಉತ್ತರ ಕನ್ನಡದ ಜೊತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ಸಹ ಯು ಟಿ ಖಾದರ್ ಅವರಿಗೆ ನೀಡಲಾಗಿದೆ.
ಯು ಟಿ ಖಾದರ್ ಅವರಿಗೆ ಅವರ ಸ್ವಕ್ಷೇತ್ರದಲ್ಲಿಯೇ ಸಾಕಷ್ಟು ಕೆಲಸಗಳಿವೆ. ಜೋರು ಮಳೆ ಆದರೆ ಮಂಗಳೂರಿನಲ್ಲಿಯೂ ನೂರಾರು ಸಮಸ್ಯೆಗಳು ಎದುರಾಗುತ್ತವೆ. ಹೀಗಿರುವಾಗ ಅವರು ಸ್ವಕ್ಷೇತ್ರದ ಕೆಲಸ ಬಿಟ್ಟು ಇಲ್ಲಿ ಬಂದಿರಲು ಸಾಧ್ಯವಿಲ್ಲ. ಈ ಬಗ್ಗೆ ಅರಿವಿದ್ದರೂ ಸರ್ಕಾರ ಸ್ಥಳೀಯ ಶಾಸಕರಿಗೆ ಉಸ್ತುವಾರಿ ಸಚಿವ ಸ್ಥಾನ ಕೊಟ್ಟಿಲ್ಲ. ಈ ಮೊದಲು ಬಿಜೆಪಿ ಸಹ ಈ ಜಿಲ್ಲೆಯವರನ್ನು ಬಿಟ್ಟು ಬೇರೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿತ್ತು. ಸದ್ಯ ಕಾಂಗ್ರೆಸ್ ಸಹ ಅದೇ ದಾರಿ ಹಿಡಿದಿದೆ. ಇಲ್ಲಿನವರಿಗೆ ಈ ಹುದ್ದೆ ಕೊಟ್ಟರೆ ಅವರವರಲ್ಲಿಯೇ ಮುನಿಸು ಹೆಚ್ಚಾಗುವ ಕಾರಣದಿಂದ ಪರ ಜಿಲ್ಲೆಯವರಿಗೆ ಜವಾಬ್ದಾರಿ ನೀಡುವ ಕೆಲಸ ನಡೆದಿದೆ.