ಶಿರಸಿಯ ಸಹಸ್ರಳ್ಳಿಯ ಮನೆಯಲ್ಲಿ ಮಲಗಿದ್ದ 12 ವರ್ಷದ ಮಿಥುನ್ ನಾಯ್ಕ ಅವರು ಹಾವು ಕಚ್ಚಿ ಸಾವನಪ್ಪಿದ್ದು, ಮಿಥುನ್ ನಾಯ್ಕ ಅವರ ತಂದೆ ಪುಟ್ಟಪ್ಪ ನಾಯ್ಕ ಅವರು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ಧವೂ ಅವರು ನಿರ್ಲಕ್ಷದ ಆರೋಪ ಮಾಡಿದ್ದಾರೆ. ಈ ದಿನ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಪುಟ್ಟಪ್ಪ ನಾಯ್ಕ ಅವರನ್ನು ಮಾತನಾಡಿಸಿದ್ದು, ಆ ದಿನ ನಡೆದ ಘಟನಾವಳಿಗಳನ್ನು ಮೆಲಕು ಹಾಕಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಬಳಿಯ ಸಹಸ್ರಳ್ಳಿಯಲ್ಲಿ ಪುಟ್ಟಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಪುಟ್ಟಪ್ಪ ನಾಯ್ಕ ಅವರಿಗೆ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಎಂಬ ಮಕ್ಕಳಿದ್ದು, ಕಳೆದ ಬುಧವಾರ ಹಾವು ಕಚ್ಚಿದ ಕಾರಣ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದಾರೆ. ರಾತ್ರಿ ಊಟ ಮುಗಿಸಿ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ಮಲಗಿದ್ದು, ಬೆಳಗ್ಗೆ ಎದ್ದಾಗ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರಿಗೆ ಹಾವು ಕಚ್ಚಿದ್ದು ಅರಿವಿಗೆ ಬಂದಿತ್ತು. ಮಕ್ಕಳಿಬ್ಬರು ವಾಂತಿ ಮಾಡಿಕೊಂಡಿದನ್ನು ನೋಡಿದ ಪಾಲಕರು ಅವರನ್ನು ಸರ್ಕಾರಿ ಪಂಡಿತ್ ಆಸ್ಪತ್ರೆಗೆ ಕರೆತಂದಿದ್ದರು. `ಬೆಳಗ್ಗೆ 4.45ರ ವೇಳೆಗೆ ಆಸ್ಪತ್ರೆಗೆ ಬಂದಾಗ ಅಲ್ಲಿ ವೈದ್ಯರಿರಲಿಲ್ಲ. 10 ದನ ಹಾಗೂ ಇಬ್ಬರು ಜನ ಮಾತ್ರ ಆಸ್ಪತ್ರೆ ಮುಂದಿದ್ದರು’ ಎಂದು ಪುಟ್ಟಪ್ಪ ನಾಯ್ಕ ಅವರು ಹೇಳಿದ್ದಾರೆ. `ಮಕ್ಕಳ ಅನಾರೋಗ್ಯದ ಬಗ್ಗೆ ವಿಚಾರಿಸಿದಾಗ ಅಲ್ಲಿ-ಇಲ್ಲಿ ಎಂದು ತಿರುಗಾಡಿಸಿದರು. ಅದಾದ ನಂತರ ನರ್ಸ ಒಬ್ಬರು ಬಂದಿದ್ದು, ನಂತರ ಅವರು ಅಲ್ಲಿಂದ ಕಣ್ಮರೆಯಾದರು. 10 ನಿಮಿಷದ ನಂತರ ಡಾಕ್ಟರ್ ಬಂದಿದ್ದು, ಅವರಿಂದ ಹಾವು ಕಚ್ಚಿರುವುದನ್ನು ಗುರುತಿಸಲು ಆಗಲಿಲ್ಲ. ಆ ಡಾಕ್ಟರ್ ಸಹ ನಿದ್ದೆಗಣ್ಣಿನಲ್ಲಿದ್ದರು’ ಎಂದು ಪುಟ್ಟಪ್ಪ ನಾಯ್ಕ ಅವರು ವಿವರಿಸಿದ್ದಾರೆ.
`ಮಿಥುನ್ ನಾಯ್ಕ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ, ಕೈ ಸನ್ನೆ ಮಾಡುತ್ತಿದ್ದರು. ಈ ವೇಳೆ ಡಾಕ್ಟರ್ ಡ್ರಿಪ್ ಏರಿಸಲು ಸೂಚಿಸಿದ್ದು, ಸೂಚಿ ಚುಚ್ಚುವುದನ್ನು ನೋಡಿ ಮಿಥುನ್ ನಾಯ್ಕ ಅವರು ಕೂಗಿದರು. ಅದಾದ ನಂತರ ಒಮ್ಮೆಲೆ ಬಿದ್ದಿದ್ದು, ಹುಬ್ಬಳ್ಳಿ ಅಥವಾ ಕಾರವಾರ ಕಿಮ್ಸ್ ಆಸ್ಪತ್ರೆಗೆ ಒಯ್ಯುವಂತೆ ವೈದ್ಯರು ಸೂಚಿಸಿದರು’ ಎಂಬುದನ್ನು ಪುಟ್ಟಪ್ಪ ನಾಯ್ಕ ಅವರು ಮೆಲಕು ಹಾಕಿದ್ದಾರೆ. `ದೂರದ ಆಸ್ಪತ್ರೆಗೆ ಕರೆದೊಯ್ಯಲು ಆಗದ ಕಾರಣ ಸ್ನೇಹಿತರ ಸೂಚನೆ ಮೇರೆಗೆ ಮಹಾಲಕ್ಷಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದರು. ಆ ಆಸ್ಪತ್ರೆಯವರು ಮಗಳು ದೀಕ್ಷಾ ನಾಯ್ಕ ಅವರನ್ನಾದರೂ ಬದುಕಿಸುವ ಪ್ರಯತ್ನ ಮಾಡಿದ್ದು, ಅದು ಸಹ ಅನುಮಾನ ಎಂದಿದ್ದರು. ಆದರೆ, ವೈದ್ಯರ ಚಿಕಿತ್ಸೆ ನಂತರ ದೀಕ್ಷಾ ನಾಯ್ಕ ಅವರು ಜೀವಾಪಾಯದಿಂದ ಪಾರಾದರು’ ಎಂದು ವಿವರಿಸಿದರು.
`ಮಿಥುನ್ ನಾಯ್ಕ ಅವರ ಕಿವಿಗೆ ಹಾಗೂ ದೀಕ್ಷಾ ನಾಯ್ಕ ಅವರ ಕೈಗೆ ಹಾವು ಕಚ್ಚಿದನ್ನು ಮಹಾಲಕ್ಷಿ ಆಸ್ಪತ್ರೆ ವೈದ್ಯರು ನೋಡಿ ತಿಳಿಸಿದರು. ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಏನಾಗಿದೆ? ಎಂದು ಸಹ ಗೊತ್ತಾಗುವ ಹಾಗಿರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಸರಿಯಾಗಿ ಔಷಧಿ ಮಾಡಿದ್ದರೆ ಮಿಥುನ್ ನಾಯ್ಕ ಅವರು ಸಾವನಪ್ಪುತ್ತಿರಲಿಲ್ಲ. ಅಲ್ಲನ ಆಸ್ಪತ್ರೆಯವರಿಗೆ ತುರ್ತು ಪರಿಸ್ಥಿತಿಯಲ್ಲಿ ಏನಾಗಿದೆ? ಎಂದು ಸಹ ಗೊತ್ತಾಗುವುದಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ಎಲ್ಲಾ ವಿಷಯ ಕೇಳಿದ ಅನಂತಮೂರ್ತಿ ಹೆಗಡೆ ಅವರು ಪುಟ್ಟಪ್ಪ ನಾಯ್ಕ ಅವರಿಗೆ ಆರ್ಥಿಕ ಸಹಾಯ ಮಾಡಿದರು. `ಸರ್ಕಾರಿ ಆಸ್ಪತ್ರೆ ಸುಧಾರಿಸಿ’ ಎಂಬ ನಿಟ್ಟಿನಲ್ಲಿ ಹೋರಾಟ ನಡೆಸುವುದಾಗಿ ಆಶ್ವಾಸನೆ ನೀಡಿದರು. `ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಮಿಥುನ್ ನಾಯ್ಕ ಅವರ ಸಾವಿಗೆ ನ್ಯಾಯ ಸಿಗಬೇಕು’ ಎಂದು ಪುಟ್ಟಪ್ಪ ನಾಯ್ಕ ಅವರು ಆಗ್ರಹಿಸಿದರು.