`ಅಕ್ರಮ-ಅವ್ಯವಹಾರಗಳ ಬಗ್ಗೆ ದೂರು ನೀಡಿದ ಕಾರಣ ಸೇಪ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ ಜಿ ಶಂಕರ್ ಅವರು ತಮ್ಮ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ’ ಎಂದು ಅದೇ ಸೊಸೈಟಿಯಲ್ಲಿ ಹಿರಿಯ ಅಭಿವೃದ್ಧಿ ಅಧಿಕಾರಿಯಾಗಿರುವ ರವಿಚಂದ್ರ ಹಳದಿಪುರ ಅವರು ದೂರಿದ್ದಾರೆ. `ಉನ್ನತ ಹುದ್ದೆ ನೀಡದ ಕಾರಣ ರವಿಚಂದ್ರ ಹಳದಿಪುರ ಅವರು ಸುಳ್ಳು ದೂರು ನೀಡಿದ್ದಾರೆ’ ಎಂದು ಕಾರಣ ಸೇಪ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ ಜಿ ಶಂಕರ್ ಅವರು ಹೇಳಿದ್ದಾರೆ.
ಹೊನ್ನಾವರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಾರಣ ಸೇಪ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಸದ್ಯ ವಿವಾದದ ಕೇಂದ್ರವಾಗಿದೆ. ಸೊಸೈಟಿಯಲ್ಲಿ ಕೆಲಸ ಮಾಡುವ ಮೂವರು ಉದ್ಯೋಗಿಗಳು ಹಿರಿಯ ಅಭಿವೃದ್ಧಿ ಅಧಿಕಾರಿಯಾಗಿರುವ ರವಿಚಂದ್ರ ಹಳದಿಪುರ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಅದರೊಂದಿಗೆ ಸ್ವತಃ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರು ಸಹ ರವಿಚಂದ್ರ ಹಳದಿಪುರ ಅವರ ವಿರುದ್ಧ ದೂರು ನೀಡಿದ್ದಾರೆ. ಒಂದೇ ವಿಷಯವಾಗಿ ನಾಲ್ಕು ಕೇಸುಗಳನ್ನು ಎದುರಿಸುತ್ತಿರುವ ರವಿಚಂದ್ರ ಹಳದಿಪುರ ಅವರು ಮತ್ತೊಂದು ದೂರು ನೀಡಿದ್ದು, ಈ ಎಲ್ಲಾ ದೂರುಗಳು ಕೋರ್ಟು-ಕಚೇರಿಯ ಕಡತ ಸೇರಿದೆ.
ಹೊನ್ನಾವರ ಗಾಂಧೀನಗರ ರವಿಚಂದ್ರ ಕೇಶವ ಹಳದಿಪುರ ಅವರು ಸೇಪ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅದೇ ಸಂಸ್ಥೆಯಲ್ಲಿ ಕೆಲಸ ಮಾಡಿರುವ ರವಿಚಂದ್ರ ಹಳದಿಪುರ ಅವರು ಅಲ್ಲಿನ ಆಗು-ಹೋಗುಗಳ ಬಗ್ಗೆ ಅರಿವುಹೊಂದಿದ್ದು, ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ-ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕಾಯುಕ್ತರಿಗೂ ದೂರು ನೀಡಿರುವುದಾಗಿ ಹೇಳಿದ್ದಾರೆ. `ದೂರು ನೀಡಿದನ್ನು ಸಹಿಸದೇ ತಮ್ಮನ್ನು ಸಂಸ್ಥೆಯಿAದ ಹೊರದಬ್ಬುವ ಪ್ರಯತ್ನ ನಡೆದಿದೆ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಕಚೇರಿಯಲ್ಲಿರುವಾಗಲೇ ತಮ್ಮ ಮೇಲೆ ದಾಳಿ ನಡೆದಿರುವ ಬಗ್ಗೆಯೂ ರವಿಚಂದ್ರ ಹಳದಿಪುರ ಅವರು ಅಳಲು ತೋಡಿಕೊಂಡಿದ್ದಾರೆ. ಜುಲೈ 7ರಂದು ಸೇಪ್ ಸ್ಟಾರ್ ಸೌಹಾರ್ದ ಸಂಘದ ಉದ್ಯೋಗಿಗಳಾದ ನಾಗರಾಜ ಶ್ರೀಧರ ನಾಯ್ಕ ಹಾಗೂ ಸಂದೀಪ ಪರಮೇಶ್ವರ ನಾಯ್ಕ ಅವರ ಜೊತೆ ಅಧ್ಯಕ್ಷ ಜಿ ಜಿ ಶಂಕರ್ ಅವರು ಸೇರಿ `ನಿನ್ನನ್ನು ಇಲ್ಲಿಂದ ಓಡಿಸದಿದ್ದರೆ ಉಳಿಗಾಲವಿಲ್ಲ’ ಎಂದು ಬೆದರಿಸಿದ ಬಗ್ಗೆ ದೂರಿದ್ದಾರೆ.
ಆದರೆ, ಸೇಪ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ ಜಿ ಶಂಕರ್ ಅವರು ಇದಕ್ಕೆ ಇನ್ನೊಂದು ಬಗೆಯಲ್ಲಿ ಪೊಲೀಸ್ ಕೇಸು ದಾಖಲಿಸಿದ್ದಾರೆ. ಉದ್ಯೋಗಿಗಳಾದ ನಾಗರಾಜ ಶ್ರೀಧರ ನಾಯ್ಕ ಹಾಗೂ ಸಂದೀಪ ಪರಮೇಶ್ವರ ನಾಯ್ಕ ಅವರಿಗೂ ರವಿಚಂದ್ರ ಹಳದಿಪುರ ಅವರು ತೊಂದರೆ ಮಾಡಿದ್ದಾರೆ. ಹೀಗಾಗಿ ಅವರು ಪ್ರತ್ಯೇಕ ದೂರು ನೀಡಿದ್ದಾರೆ. ರವಿಚಂದ್ರ ಹಳದಿಪುರ ಅವರ ವಿರುದ್ಧ ಬಂದ ಆರೋಪದ ವಿಚಾರಣೆ ನಡೆಸುವಾಗ `ನೀ ಎಂತ ಅಧ್ಯಕ್ಷ?’ ಎಂದು ತಮಗೆ ನಿಂದಿಸಿದ್ದಾರೆ. `ಕೂಡಲೇ ತನ್ನನ್ನು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಂದು ನೇಮಕ ಮಾಡಬೇಕು. ಜೊತೆಗೆ ಹೆಚ್ಚಿನ ಸಂಬಳ ಕೊಡಬೇಕು’ ರವಿಚಂದ್ರ ಹಳದಿಪುರ ಅವರು ಎಂದು ತಾಕೀತು ಮಾಡಿದ್ದಾರೆ. `ಇಲ್ಲವಾದರೆ ಸುಳ್ಳು ದೂರು ಕೊಟ್ಟು ಜೈಲಿಗೆ ಹಾಕಿಸುವ ಬೆದರಿಸಿದ್ದಾರೆ’ ಎಂದು ಜಿ ಜಿ ಶಂಕರ್ ಅವರು ಆರೋಪಿಸಿದ್ದಾರೆ. ಸದ್ಯ ಈ ದೂರನ್ನು ಸಹ ದಾಖಲಿಸಿದ ಹೊನ್ನಾವರ ಪೊಲೀಸರು ಯಾವುದು ಸತ್ಯ? ಯಾವುದು ಸುಳ್ಳು? ಎಂದು ವಿಚಾರಣೆ ಶುರು ಮಾಡಿದ್ದಾರೆ.