ಗಿಡ ನೆಡುವುದು ಪ್ರಕೃತಿ ಮೇಲೆ ಮಾನವ ಮಾಡುವ ದೌರ್ಜನ್ಯ’ ಎಂದು ಪರಿಸರ ಹೋರಾಟಗಾರ ಅಖಿಲೇಶ ಚಿಪ್ಪಲಿ ಅವರು ಪ್ರತಿಪಾದಿಸಿದ್ದಾರೆ. ‘ಹೊಸ ಗಿಡ ನೆಡುವುದಕ್ಕಿಂತಲೂ ಈಗಿರುವ ಕಾಡು ರಕ್ಷಣೆ ಅತೀ ಅಗತ್ಯ’ ಎಂದವರು ಪ್ರತಿಪಾದಿಸಿದ್ದಾರೆ.
ಹೊನ್ನಾವರದ ಬಂಗಾರಮಕ್ಕಿಯಲ್ಲಿ ಮಾರುತಿ ಗುರೂಜಿಯವರು ನಡೆಸುತ್ತಿರುವ ‘ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ’ದಲ್ಲಿ ಮಾತನಾಡಿದ ಅವರು ‘ಮುಂಗಟ್ಟೆ, ಕಬ್ಬೆಕ್ಕು ಮೊದಲಾದ ವನ್ಯಜೀವಿಗಳು ಹಣ್ಣು ತಿಂದು ಬೀಜ ಬಿತ್ತನೆ ಮಾಡಿ ಗಿಡ ನೆಡುತ್ತವೆ. ಉತ್ತಮ ಹಣ್ಣು ಮಾತ್ರ ಆರಿಸಿ ಅದರ ಮೂಲಕ ಅವು ಬೀಜ ಪ್ರಸರಣೆ ಮಾಡುತ್ತವೆ. ಅಂಥ ಶೇ 99ರಷ್ಟು ಗಿಡಗಳು ಬದುಕಿ ಮರವಾಗುತ್ತವೆ. ಆದರೆ, ಮನುಷ್ಯ ನೆಟ್ಟ ಶೇ 99 ರಷ್ಟು ಗಿಡಗಳು ಸಾವನಪ್ಪುತ್ತವೆ’ ಎಂದವರು ವಿವರಿಸಿದರು. ‘ಸರ್ಕಾರ ಗಿಡ ನೆಡುವುದಕ್ಕಾಗಿ ಕೋಟಿ ಕೋಟಿ ರೂ ಖರ್ಚು ಮಾಡುತ್ತದೆ. ಮೊದಲು ಬೀಜ ಸಂಗ್ರಹಣೆ, ನಂತರ ಮಣ್ಣು-ಮರಳಿನ ಮಿಶ್ರಣ, ಅದಾದ ಮೇಲೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ. ಇದೆಲ್ಲವೂ ಗಿಡ ನೆಡುವ ಹೆಸರಿನಲ್ಲಿ ನಡೆಯುವ ಪ್ರಕೃತಿ ಮೇಲಿನ ದೌರ್ಜನ್ಯ’ ಎಂದವರು ನೋವಿನಲ್ಲಿ ಹೇಳಿದ್ದಾರೆ. ಜೊತೆಗೆ ‘2022ರಲ್ಲಿ ಭಾರತದಲ್ಲಿ 142 ಜನ ಶತಕೋಟ್ಯಧೀಶರಿದ್ದರು. ಇದೀಗ 576 ಶತಕೋಟ್ಯಧೀಶರಿದ್ದಾರೆ. ಅವರಲ್ಲಿ ಕೆಲವರು ಪಶ್ಚಿಮಘಟ್ಟ ಕೊಳ್ಳೆಹೊಡೆದು ಕೋಟಿ ಸಂಪಾದಿಸಿದ್ದಾರೆ’ ಎಂದು ಅಂಕಿ-ಸಂಖ್ಯೆಗಳ ಮಾಹಿತಿ ನೀಡಿದರು.
‘ಪ್ರಕೃತಿಯಲ್ಲಿರುವ ಪ್ರಾಣಿ-ಪಕ್ಷಿಗಳೆಲ್ಲವೂ ಪರಿಸರ ಸೇವೆ ಮಾಡುತ್ತಿವೆ. ಮನುಷ್ಯ ಮಾತ್ರ ಇದರಿಂದ ಹೊರತಾಗಿದ್ದು, ಪಶ್ಚಿಮ ಘಟ್ಟದ ಉಳಿದರೆ ಮಾತ್ರ ಭವಿಷ್ಯ. ನಶಿಸಿದರೆ ಸರ್ವನಾಶ ಖಚಿತ’ ಎಂದರು. ‘ಗಿಡ ನೆಡುವುದು ನಮ್ಮ ಕೆಲಸ ಅಲ್ಲ. ಅದು ನಾವು ಪರಿಸರದ ಮೇಲೆ ಮಾಡುವ ದೌರ್ಜನ್ಯ’ ಎಂದು ಪ್ರತಿಪಾದಿಸಿದ ಅವರು ‘ಮಾನವನ ಅಹಂಕಾರ ಕೇಡು ಎಂದಿಗೂ ದುಖಃದಲ್ಲಿ ಅಂತ್ಯವಾಗುತ್ತದೆ’ ಎಂದರು.
‘ಪಶ್ಚಿಮಘಟ್ಟ ಇಲ್ಲಿ ವಾಸಿಸುವವರಿಗೆ ಮಾತ್ರ ಸೀಮಿತ ಅಲ್ಲ. ಇಡೀ ವಿಶ್ವಕ್ಕೆ ಈ ಪಶ್ಚಿಮಘಟ್ಟ ಅಗತ್ಯವಾಗಿದ್ದು, ಈ ಕಾಡು ದಕ್ಷಿಣ ಭಾರತಕ್ಕೆ ಜೀವನಾಡಿಯಾಗಿದೆ’ ಎಂದರು. ‘ರೈತರು ಉಳಿಯಬೇಕು ಎಂದರೆ ಕಾಡು ಉಳಿಯಬೇಕು. ಪ್ರಕೃತಿಗೆ ನಮ್ಮ ಅಗತ್ಯವಿಲ್ಲ. ಆದರೆ, ನಮಗೆ ಪೃಕೃತಿಯ ಅಗತ್ಯವಿದೆ. ಸೈಟು, ಕಾರು, ಬಂಗಲೆ ಆಸ್ತಿ ಅಲ್ಲ. ಮುಂದಿನ ಜನಾಂಗಕ್ಕೆ ಶುದ್ದ ಗಾಳಿ-ನೀರು ಕೊಡುವುದೇ ದೊಡ್ಡ ಕೊಡುಗೆ. ಅದನ್ನು ಪಾಲಿಸಿ’ ಎಂದವರು ಮನವಿ ಮಾಡಿದರು.
‘ಗಿಡ-ಮರಗಳನ್ನು ಪೂಜಿಸುವುದು ನಮ್ಮ ಪರಂಪರೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟ ಹಾಳು ಮಾಡಲಾಗುತ್ತಿದೆ. ಬೆಂಗಳೂರು ಬೆಳೆಸಲು ಸುತ್ತಲು ಹಳ್ಳಿ ಹಾಳು ಮಾಡಿದ್ದಾರೆ. ಬೆಂಗಳೂರಿನವರ ನೀರಿನ ದಾಹಕ್ಕೆ ಶರಾವತಿ ನದಿ ತಿರುಗಿಸುವ ಯೋಜನೆ ಮಾಡಿದ್ದು, ಆ ವೇಳೆ ಸುಳ್ಳು ವರದಿ ನೀಡಿ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿತ್ತು. ನದಿ ನೀರು ಸಮುದ್ರ ಸೇರುವುದು ವ್ಯರ್ಥವಲ್ಲ’ ಎಂದವರು ವಿವರಿಸಿದರು. ‘ಕಸ್ತೂರಿ ರಂಗನ್-ಮಾಧವ ಗಾಡ್ಕಳ ವರದಿ ಜಾರಿ ಆದರೆ ಮನೆ ಕಟ್ಟುವ ಹಾಗಿಲ್ಲ. ಮರಕ್ಕೆ ಔಷಧಿ ಹಾಕುವ ಹಾಗಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಅಡಿಕೆ-ಕಾಫಿಯ ಕೊಳೆ ರೋಗಕ್ಕೆ ಬೋರ್ಡೊ ಮಿಶ್ರಣ ಹೊಡೆಯಲು ಅನುಮತಿ ಇದೆ. ಕಸ್ತೂರಿ ರಂಗನ್ ವರದಿ ಬೇಡ ಎಂದು ಪಾದಯಾತ್ರೆ ಮಾಡಿದವರು ವರದಿ ಅಧ್ಯಯನ ಮಾಡಿದವರಲ್ಲ’ ಎಂದರು.
‘ಪಶ್ಚಿಮಘಟ್ಟ ಉಳಿದಿದ್ದರಿಂದಲೇ ಸೀಮೆ ಪ್ರದೇಶದಲ್ಲಿ ಅಡಿಕೆ, ಕಬ್ಬು ಬೆಳೆಯಲಾಗುತ್ತಿದೆ. ಇಲ್ಲಿನ ನೀರು ಬಳಸುವ ಅವರಿಗೆ ಪಶ್ಚಿಮಘಟ್ಟದ ಬಗ್ಗೆ ಕೃತಜ್ಞತಾ ಭಾವವಿರಬೇಕು’ ಎಂದು ಕಿವಿಮಾತು ಹೇಳಿದರು. ‘ಪಶ್ಚಿಮಘಟ್ಟದಲ್ಲಿ 5 ಸಾವಿರಕ್ಕೂ ಅಧಿಕ ಪ್ರಬೇದದ ಗಿಡಗಳಿವೆ. ಅದರಲ್ಲಿ 325 ಅಪಾಯದ ಅಂಚಿನಲ್ಲಿದೆ. ಇಲ್ಲಿನ ಜೀವ ವೈವಿಧ್ಯ ಪ್ರಬೇದಗಳು ದಾಖಲಾಗಿಲ್ಲ. ಹೀಗಿರುವಾಗ ಶರಾವತಿ ನದಿಗೆ ಅಣೆಕಟ್ಟು ಕಟ್ಟುವಾಗ ಇಲ್ಲಿ ಸಸ್ಯ ವೈವಿದ್ಯವೇ ಇಲ್ಲ ಎಂದು ಸುಳ್ಳು ವರದಿ ನೀಡಲಾಗಿತ್ತು. ಸದ್ಯ ಶರಾವತಿ ಪಂಪ್ ಸ್ಟೋರೆಜ್ ಯೋಜನೆಗೂ ಅಂಥಹುದೇ ಸುಳ್ಳು ಹೇಳಲಾಗುತ್ತಿದೆ’ ಎಂದು ದೂರಿದರು. ಶರಾವತಿ ನದಿಗೆ ಕಟ್ಟಿದ ಅಣೆಕಟ್ಟು ಹಾಗೂ ಅಲ್ಲಿ ಸಂಗ್ರಹಿಸಿದ ಹೂಳು ಜಲಚರಕ್ಕೆ ಅಪಾಯ’ ಎಂದರು. ಆ ಹೂಳು ತೆಗೆಯಲು ಮತ್ತೆ ಲಕ್ಷ ಕೋಟಿ ವ್ಯವಹಾರ ನಡೆಯುತ್ತದೆ. ‘ಯೋಜನೆಗಳು ವಿಫಲ ಎಂಬ ಅರಿವಿದ್ದರೂ ಅದನ್ನು ಮಾಡಲಾಗುತ್ತದೆ. ಕಾರಣ JCB ಪಕ್ಷಗಳು ಈ ಯೋಜನೆಗಾಗಿ ದುಡ್ಡು ತಿಂದಿವೆ’ ಎಂದು ದೂರಿದರು.
‘ಇರುವೆ ಸಹ ಮಣ್ಣಿನಲ್ಲಿ ಹುಳಿ ತೆಗೆದು ಪರಿಸರ ಸೇವೆ ಮಾಡುತ್ತವೆ. ಎಲ್ಲಾ ಪ್ರಾಣಿಗಳು ಪರಸ್ಪರ ಕೊಂಡಿಯಾಗಿ ಬದುಕುತ್ತಿವೆ. ಮನುಷ್ಯ ಮಾತ್ರ ಇದಕ್ಕೆ ಹೊರತಾಗಿದ್ದು, ಎಲ್ಲರೂ ಸೇರಿ ಇದ್ದ ಕಾಡು ಉಳಿಸೋಣ’ ಎಂದವರು ಮನವಿ ಮಾಡಿದರು.