ಹಳಿಯಾಳದಲ್ಲಿ 14 ಜನ ಗುಂಪು ಕಟ್ಟಿಕೊಂಡು ಬಂದು ವಿದ್ಯಾರ್ಥಿಯೊಬ್ಬರನ್ನು ಥಳಿಸಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದವರ ಮೇಲೆಯೂ ಗುಂಪಿನಲ್ಲಿದ್ದವರು ಹಲ್ಲೆ ಮಾಡಿದ್ದಾರೆ.
ಹಳಿಯಾಳದ ಮದ್ನಳ್ಳಿಯ ಮಹೇಶ ಸಾರಂಗೇಕರ್ (20) ಅವರ ಮೇಲೆ ಈ ದಾಳಿ ನಡೆದಿದೆ. ಮದ್ನಳ್ಳಿಯ ಮಹೇಶ ಸಾರಂಗೇಕರ್ ಹಾಗೂ ಅದೇ ಊರಿನ ಮಲ್ಲೇಶ ಮಾಸ್ತಮರೆಡಿ, ಆಕಾಶ ಗಳಗಿ, ಸುನಿಲ ಪಕಿರಪ್ಪಾ ಹೊಂಡಪ್ಪನವರ್ ಹಾಗೂ ಕಾರ್ತಿಕ ಪಕೀರಪ್ಪಾ ಹೊಂಡೆಪ್ಪನವರ್ ನಡುವೆ ಮಾರ್ಚ 22ರಂದು ಜಗಳ ನಡೆದಿತ್ತು. ಆ ಜಗಳವೇ ಮರುದಿನದ ಹೊಡೆದಾಟಕ್ಕೆ ಕಾರಣವಾಗಿದೆ.
ಮಾರ್ಚ 23ರ ರಾತ್ರಿ ಮಹೇಶ ಸಾರಂಗೇಕರ್ ಅವರು ತಮ್ಮ ಗೆಳೆಯರಾದ ಜಗನ್ನಾಥ ವೀರಭದ್ರಪ್ಪ ನಾಡಗೌಡರ್, ವಿನಾಯಕ ಬಸವರಾಜ ಬಸ್ತವಾಡ ಹಾಗೂ ಪ್ರಶಾಂತ ದೇವೇಂದ್ರ ಕಲಗರ ಅವರ ಜೊತೆ ಗಜಲಕ್ಷಿ ದೇವಾಲಯದ ಎದುರು ಇದ್ದಾಗ ಮಲ್ಲೇಶ ಮಾಸ್ತಮರೆಡಿ ಅವರು ದೊಡ್ಡ ಗುಂಪು ಕರೆದುಕೊಂಡು ಬಂದು ಹೊಡೆದಾಟ ಮಾಡಿದ್ದಾರೆ. ಆಕಾಶ ಗಳಗಿ, ಸುನಿಲ ಪಕಿರಪ್ಪಾ ಹೊಂಡಪ್ಪನವರ್ ಅವರ ಜೊತೆ ಅನಿಲ ಮಾದವ ಬೋನರಡ್ಡಿ ಅವರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದಾರೆ.
ಅದರ ಜೊತೆ ಮದ್ನಳ್ಳಿಯ ಕರವೀರ ಉದ್ದಣ್ಣನವರ, ಕುಮಾರ ರವಿ ಅರ್ಲವಾಡ, ವಿಠ್ಠಲ ಮಹೇಶ ಇಟಗಿ, ಪುನಿತ ಬಸವರಾಜ ಕೊಪ್ಪದ, ಪ್ರಜ್ವಲ ಶಂಕರ ಹೀರೆಮಠ, ಸೋಮನಾಥ ರಾಜು ಹೊಂಡಪ್ಪನವರ್, ಮಲ್ಲೇಶಿ ಬಸವರಾಜ ಮುತ್ತಲಮರಿ, ಗುರುನಾಥ ಮಾಸ್ತಮರಡಿ ಹಾಗೂ ಪಿಂಡು ಸುಭಾಷ ಚಲವಾದಿ ಸೇರಿ ಮಹೇಶ ಸಾರಂಗೇಕರ್ ಅವರನ್ನು ಥಳಿಸಿದ್ದಾರೆ. ಪೈಪಿನಿಂದ ಹೊಡೆದು ಗಾತ ಮಾಡಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಮಹೇಶ ಅವರ ಅಣ್ಣ ಮೋಹನ ಸುರೇಶ ಸಾಗರೇಕರ್ ಹಾಗೂ ಸ್ನೇಹಿತ ಅಜಯ ಕುಂಬಾರ್ ಸಹ ಪೆಟ್ಟು ತಿಂದಿದ್ದಾರೆ.
ಕೊನೆಗೆ ಊರಿನ ಜನ ಆಗಮಿಸಿ ಹೊಡೆದಾಟ ತಪ್ಪಿಸಿದ್ದು, ಜನ ಜಮಾಯಿಸುವುದನ್ನು ನೋಡಿದ ಆ 14 ಜನ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಮಹೇಶ ಸಾರಂಗೇಕರ್ ಅವರು ಹಳಿಯಾಳ ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.