ಯಲ್ಲಾಪುರದ ಶೇಡಿಕೆರೆ ಮಹಾಗಣಪತಿ ದೇವಾಲಯದಲ್ಲಿದ್ದ ಗಂಟೆ ಹಾಗೂ ಇನ್ನಿತರ ಸಾಮಗ್ರಿ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು, ಆ ಕಳ್ಳನಿಂದ 1.19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಯಲ್ಲಾಪುರದಲ್ಲಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದ ಕೃಷ್ಣಾನಂದ ಇಂಗಳೇ ಕಳ್ಳತನದ ಕೃತ್ಯ ನಡೆಸಿರುವುದು ಗೊತ್ತಾಗಿದೆ.
ಏಪ್ರಿಲ್ 18ರ ರಾತ್ರಿ ಯಲ್ಲಾಪುರದ ಶೇಡಿಕೆರೆ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಒಳಗೆ ಕಳ್ಳರು ನುಗ್ಗಿದ್ದರು. ದೇವರ ಮುಂದೆ ತೂಗುತ್ತಿದ್ದ ಗಂಟೆ ಸೇರಿ ಅಲ್ಲಿದ್ದ 21 ಸಾವಿರ ರೂ ಮೌಲ್ಯದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದರು. ಐತಿಹಾಸಿಕ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದರಿಂದ ಗ್ರಾಮಸ್ಥರ ಜೊತೆ ಭಕ್ತರು ಆತಂಕಕ್ಕೆ ಒಳಗಾಗಿದ್ದರು. ಇಡಗುಂದಿ ಬಳಿಯ ಕೋಮಡಿಯ ಸುಣಜೋಗದ ಶಿವರಾಮ ಕೃಷ್ಣ ಭಟ್ಟ ಅವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದ್ದು, ಊರಿನವರ ಜೊತೆ ಚರ್ಚಿಸಿ ಅವರು ಪೊಲೀಸ್ ದೂರು ನೀಡಿದ್ದರು.
ಗರ್ಭಗುಡಿ ಮುಂದೆ ತೂಗುತ್ತಿದ್ದ ನಾಲ್ಕು ದೊಡ್ಡ ಗಂಟೆಗಳು ಸೇರಿ 10 ಗಂಟೆ, ಅಲ್ಲಿದ್ದ ತಾಮ್ರದ ಕೊಡ, ಹಿತ್ತಾಳೆಯ ಆರತಿ, ಹಿತ್ತಾಳೆ ತಾಟು, ಹಿತ್ತಾಳೆ ಚಂಬು, ದೀಪ, ಆಲ್ಯುಮಿನಿಯಂ ಹಾಗೂ ಸ್ಟೀಲ್ ತೋಪುಗಳು ಕಾಣೆಯಾಗಿರುವುದನ್ನು ಅವರು ವಿವರಿಸಿದ್ದರು. ಹಂಡೆಯನ್ನು ಸಹ ಕಳ್ಳರು ದೋಚಿರುವ ಬಗ್ಗೆ ದೂರಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನಪಡೆದ ಪಿಐ ರಮೇಶ ಹಾನಾಪುರ ಅವರು ಕಳ್ಳರ ಪತ್ತೆಗೆ ಬಲೆ ಬೀಸಿದರು. ಪಿಐ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.
ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಮಹಾವೀರ ಡಿಎಸ್, ಮಹಂತೇಶ ಕಡಪಟ್ಟಿ ಸೇರಿ ಅನುಮಾನಾಸ್ಪದ ವ್ಯಕ್ತಿಯ ವಿಚಾರಣೆ ಮಾಡಿದರು. ಅಂಬೇಡ್ಕರ್ ನಗರದ ಕೃಷ್ಣಾನಂದ ಪರಶುರಾಮ ಇಂಗಳೆ ಅವರನ್ನು ವಿಚಾರಿಸಿದಾಗ ಅವರೇ ಈ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು. ಕಳ್ಳತನಕ್ಕೆ ಬಳಸಿದ್ದ ಓಮಿನಿಯನ್ನು ಜಪ್ತು ಮಾಡಿದ ಪೊಲೀಸರು ವಿವಿಧ ಸಾಮಗ್ರಿಗಳನ್ನು ವಶಕ್ಕೆಪಡೆದರು. ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದ ಕೃಷ್ಣಾನಂದ ಇಂಗಳೆ ಅವರು ಕಳ್ಳತನಕ್ಕೆ ಕೈ ಹಾಕಿ ಜೈಲು ಸೇರಿದರು.