ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರ ವಿರುದ್ಧ ನ್ಯಾಯವಾದಿ ನಾಗರಾಜ ನಾಯಕ ಅವರು ಅಂಕೋಲಾದಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಐದು ದಿನಗಳಿಂದ ನಾಗರಾಜ ನಾಯಕ ಅವರು ಅನ್ನ-ಆಹಾರ ಸೇವಿಸಿಲ್ಲ. ಈ ಹಿನ್ನಲೆ ಬುಧವಾರ ನಾಗರಾಜ ನಾಯಕ ಅವರ ಕಣ್ಣುಗಳು ಕೆಂಪಾಗಿದೆ. ಮುಖ ಬಾಡಿದೆ. ನಾಗರಾಜ ನಾಯಕ ಅವರು ಅಸ್ವಸ್ಥರಾಗಿದ್ದರೂ ತಮ್ಮ ಪ್ರತಿಭಟನೆ ಮಾತ್ರ ನಿಲ್ಲಿಸುತ್ತಿಲ್ಲ.
`ಗೃಹ ಸಚಿವ ಜಿ ಪರಮೇಶ್ವರ ಅವರು ಸ್ಥಳಕ್ಕೆ ಬರಬೇಕು’ ಎಂದು ಆಗ್ರಹಿಸಿ ನಾಗರಾಜ ನಾಯಕ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಶುರುವಾಗಿ ಏಳು ದಿನ ಕಳೆದರೂ ಗೃಹ ಸಚಿವರು ಆಗಮಿಸುವ ಯಾವ ಸೂಚನೆಯೂ ಸಿಕ್ಕಿಲ್ಲ. ಅದಾಗಿಯೂ, ನಾಗರಾಜ ನಾಯಕ ಅವರು ಅಂಕೋಲಾದಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದು ವಿವಿಧ ಪಕ್ಷ ಹಾಗೂ ಸಂಘಟನೆ ಪ್ರಮುಖರು ಅವರಿಗೆ ಬೆಂಬಲ ನೀಡಿದ್ದಾರೆ. ಅನ್ಯಾಯಕ್ಕೆ ಒಳಗಾದ ಕೆಲವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಣಗಳನ್ನು ನಾಗರಾಜ ನಾಯಕ ಅವರು ತಮ್ಮ ಜಾಲತಾಣ ಪುಟಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ನಾಗರಾಜ ನಾಯಕ ಅವರ ದೇಹದ ಪರಿಸ್ಥಿತಿ ಹದಗೆಟ್ಟಿದೆ. ಆಹಾರವಿಲ್ಲದ ಕಾರಣ ಅವರು ನಿತ್ರಾಣರಾಗಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಥಳಕ್ಕೆ ಆಗಮಿಸಿ `ಆಹಾರ ಸೇವಿಸಿ’ ಎಂದು ಸೂಚಿಸಿದರೂ ಅದನ್ನು ನಾಗರಾಜ ನಾಯಕ ಅವರು ಒಪ್ಪಿಲ್ಲ. `ಜನಸಾಮಾನ್ಯರ ಒಳಿತಿಗಾಗಿ ಧರಣಿ ಮುಂದುವರೆಸುವೆ’ ಎಂದು ನಾಗರಾಜ ನಾಯಕ ಅವರು ಹೇಳುತ್ತಿದ್ದು, ಮೂರು ದಿನದ ಹಿಂದೆಯೇ ಆರೋಗ್ಯ ಸಿಬ್ಬಂದಿ ಅವರ ತಪಾಸಣೆ ನಡೆಸಿದ್ದಾರೆ.
ಈ ಎಲ್ಲದರ ನಡುವೆ `ತಮ್ಮ ಧರಣಿ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ನಾಗರಾಜ ನಾಯಕ ಅವರು ಆರೋಪಿಸಿದ್ದಾರೆ. ಸದ್ಯ ಜೈಹಿಂದ್ ಮೈದಾನದಲ್ಲಿ ಅವರು ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ರವಾನಿಸಿ ಮತ್ತೆ ಧರಣಿ ಮುಂದುವರೆಸಿದ್ದಾರೆ. ಇದರೊಂದಿಗೆ ನಾಗರಾಜ ನಾಯಕ ಅವರು ಧರಣಿ ಸ್ಥಳದಿಂದಲೇ ಅಕ್ರಮ ಮರಳುಗಾರಿಕೆ, ಅನಧಿಕೃತ ಗಣಿಗಾರಿಕೆ ಸೇರಿ ವಿವಿಧ ಮಾಹಿತಿಗಳ ಸಂಗ್ರಹ ಮಾಡುತ್ತಿದ್ದಾರೆ. ಆ ಮಾಹಿತಿಗಳ ಆಧಾರದಲ್ಲಿ ಅಧಿಕಾರಿಗಳಿಗೂ ದೂರು ನೀಡುತ್ತಿದ್ದು, ದೂರು ನೀಡಿದರೂ ಕ್ರಮವಾಗದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. ಜೊತೆಗೆ, ಈಗಿನ ಧರಣಿಗೂ ಅಡ್ಡಿಪಡಿಸಿದರೆ ನದಿ ನೀರಿನಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ 72 ವರ್ಷದ ಬೀರಮ್ಮ ಜಗದೀಶ ನಾಯಕ ಅವರು ಪೂರ್ಣಪ್ರಜ್ಞ ಕಾಲೇಜು ವಿಷಯವಾಗಿ ಮಾತನಾಡಿದ್ದು, ತಮಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.