ಭೂಮಿ ವಿಷಯವಾಗಿ ಶುರುವಾದ ಜಗಳ ಕತ್ತಿ-ಚಪ್ಪಲಿ ಬೀಸುವವರೆಗೆ ಹೋಗಿದ್ದು, ಒಂದೇ ಕುಟುಂಬದ ಹಲವರು ಸೇರಿ ಹೊಡೆದಾಟ ನಡೆಸಿದ್ದಾರೆ. ಈ ಹೊಡೆದಾಟದಲ್ಲಿ ಎರಡು ಗುಂಪಿನವರ ಸಂಬoಧಿಕರು ಭಾಗಿಯಾಗಿದ್ದು, ಗಲಾಟೆ ದೊಡ್ಡದಾಗಿದೆ.
ಅಂಕೋಲಾ ಬೆಳಂಬಾರದ ದಿಲೀಪ ಪುರ್ಸು ಖಾರ್ವಿ ಹಾಗೂ ಗಣಪತಿ ನಾಗಪ್ಪ ಖಾರ್ವಿ ನಡುವೆ ಈ ಯುದ್ಧ ಶುರುವಾಗಿದ್ದು, ಅವರವರ ಸಂಬAಧಿಕರು ಸಹ ಹೊಡೆದಾಟದಲ್ಲಿ ಭಾಗಿಯಾಗಿ ಏಟು ತಿಂದಿದ್ದಾರೆ. ಅಂಗಳದಲ್ಲಿ ಎರಡು ಬುಟ್ಟಿ ರೇತಿ ದಾಸ್ತಾನು ಮಾಡಿದಕ್ಕಾಗಿ ಅಶೋಕ ಖಾರ್ವಿ ಹಾಗೂ ಗಣಪತಿ ಖಾರ್ವಿ ನಡುವೆ ಜಗಳ ಶುರುವಾಗಿದ್ದು, ನಂತರ ಹಳೆಯ ವಿಷಯಗಳೆಲ್ಲವೂ ಹೊರ ಬಂದು ಹೊಡೆದಾಟ ನಡೆದಿದೆ.
ಗಣಪತಿ ನಾಗಪ್ಪ ಖಾರ್ವಿ ಅವರ ಮನೆ ಅಂಗಳದಲ್ಲಿ ದಿಲೀಪ ಪುರ್ಸು ಖಾರ್ವಿ ಅವರು ಎರಡು ಬುಟ್ಟಿ ರೇತಿ ಹಾಕಿದ್ದರು. ಇದನ್ನು ಸಹಿಸದ ಗಣಪತಿ ಖಾರ್ವಿ ಅವರು `ಆ ರೇತಿ ಇಲ್ಲಿಂದ ತೆಗಿ’ ಎಂದರು. `ಇದು ಸಾಮೂಹಿಕ ಆಸ್ತಿ. ನಮಗೂ ಹಕ್ಕಿದೆ’ ಎಂದು ದಿಲೀಪ ಖಾರ್ವಿ ಹೇಳಿದರು. ಆಗ, ಗಣಪತಿ ಖಾರ್ವಿ ಅವರು ತಮ್ಮ ದಿಲೀಪ ಖಾರ್ವಿ ಅವರ ಕೊರಳಪಟ್ಟಿ ಹಿಡಿದರು. ಇದನ್ನು ನೋಡಿದ ಬೆಳಂಬಾರದ ಅಶೋಕ ಪುರ್ಸು ಖಾರ್ವಿ ಆ ಗಲಾಟೆ ತಪ್ಪಿಸಲು ಮುಂದಾದರು. ಆಗ, ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರನ್ನು ತಳ್ಳಿದರು. ಗಣಪತಿ ಖಾರ್ವಿ ಅವರು ಮನೆಯೊಳಗೆ ಹೋಗಿ ಪತ್ನಿ ವಾಸಂತಿ ಖಾರ್ವಿ ಅವರನ್ನು ಕರೆದು ತಂದರು. ಬರುವಾಗ ಕೈಯಲ್ಲಿ ಕತ್ತಿ ಹಿಡಿದು ಬಂದಿದ್ದ ಗಣಪತಿ ಖಾರ್ವಿ ಅವರು ಅದನ್ನು ಎದುರುದಾರರ ಕಡೆ ಬೀಸಿದರು. ಅಶೋಕ ಖಾರ್ವಿ ಕತ್ತಿ ಏಟಿನಿಂದ ತಪ್ಪಿಸಿಕೊಂಡರು. ಈ ವೇಳೆ ಅಶೋಕ ಖಾರ್ವಿ ಅವರ ಅಣ್ಣ ತುಕಾರಾಮ ಖಾರ್ವಿ, ಹೆಂಡತಿ ಗೌರಿ ಖಾರ್ವಿ ಹಾಗೂ ಮಕ್ಕಳಾದ ಸುಮಂತ ಖಾರ್ವಿ, ಹೇಮಂತ ಖಾರ್ವಿ ಅಲ್ಲಿಗೆ ಬಂದರು. ಅವರೆಲ್ಲರೂ ಸೇರಿ ಈ ಜಗಳ ಬಿಡಿಸುವ ಪ್ರಯತ್ನ ಮಾಡಿದರು.
ಜಗಳ ಬಿಡಿಸಲು ಬಂದವರ ಮೇಲೆಯೂ ಗಣಪತಿ ಖಾರ್ವಿ ಕತ್ತಿ ಬೀಸಿದರು. ಆ ಕತ್ತಿ ಬೇರೆ ಕಡೆ ತಾಗಿದ್ದರಿಂದ ಅವರೆಲ್ಲರು ಬಚಾವಾದರು. ಆಗ, ವಸಂತಿ ಖಾರ್ವಿ ಅವರು ತಮ್ಮ ಮಾವ ನಾಗಪ್ಪ ಕೃಷ್ಣ ಖಾರ್ವಿ, ಮೈದುನ ಮಂಜುನಾಥ ನಾಗಪ್ಪ ಖಾರ್ವಿ, ಸುರೇಶ ನಾಗಪ್ಪ ಖಾರ್ವಿ ಹಾಗೂ ಸಂತೋಷ ಉರಿಯಾ ಖಾರ್ವಿ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೊಣ್ಣೆ-ಕಲ್ಲುಗಳ ದಾಳಿ ಶುರುವಾಯಿತು. ಈ ವೇಳೆ ವಾಸಂತಿ ಖಾರ್ವಿ ಅವರು ಎಸೆದ ಚಪ್ಪಲಿ ಅಶೋಕ ಖಾರ್ವಿ ಅವರಿಗೆ ತಾಗಿತು. ಗಣಪತಿ ಖಾರ್ವಿ ಅವರು ಅಶೋಕ ಖಾರ್ವಿ ಅವರಿಗೆ ಹೊಡೆದು ನೋವು ಮಾಡಿದರು.
ಈ ವೇಳೆ ವಾಸಂತಿ ಖಾರ್ವಿ ಅವರ ಅವರ ಮಾವ ನಾಗಪ್ಪ ಖಾರ್ವಿ, ಪ್ರಭಾಕರ ಮೋನು ಖಾರ್ವಿ ಸೇರಿ ತುಕಾರಾಮ ಖಾರ್ವಿ ಅವರಿಗೆ ಹೊಡೆಯಲು ಶುರು ಮಾಡಿದರು. ಮಂಜುನಾಥ ಖಾರ್ವಿ, ಸಂತೋಷ ಖಾರ್ವಿ, ವಾಸಂತಿ ಖಾರ್ವಿ, ಸೀತಾಬಾಯಿ ಖಾರ್ವಿ ಸೇರಿ ಗೌರಿ ಖಾರ್ವಿ, ಸುಮಂತ ಖಾರ್ವಿ ಹಾಗೂ ಹೇಮಂತ ಖಾರ್ವಿ ಅವರ ಮೇಲೆ ದಾಳಿ ಮಾಡಿದರು. ಸುರೇಶ ನಾಗಪ್ಪ ಖಾರ್ವಿ ಅವರು ದಿಲೀಪ ಖಾರ್ವಿ ಅವರ ಮೇಲೆ ಹಲ್ಲೆ ಮಾಡಿದರು. ಮಾರ್ಚ 30ರಂದು ಈ ಘಟನೆ ನಡೆದಿದ್ದು, ಈ ಎಲ್ಲಾ ವಿಷಯದ ಬಗ್ಗೆ ಅಶೋಕ ಖಾರ್ವಿ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯದ ಸೂಚನೆ ಮೇರೆಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.