ಸಬ್ಸಿಡಿ ದರದಲ್ಲಿ ರೈತರಿಗೆ ಗೊಬ್ಬರ ಹಾಗೂ ಇನ್ನಿತರ ಪರಿಕ್ಕರ ಒದಗಿಸಬೇಕಾದ ಕಂಪನಿ ಸರ್ಕಾರಕ್ಕೆ ಮೋಸ ಮಾಡಿದೆ. ಜೊತೆಗೆ ಕೃಷಿ ಇಲಾಖೆ ವಿರುದ್ಧವೇ ಕೋರ್ಟಿನಲ್ಲಿ ಕೇಸು ದಾಖಲಿಸಿದೆ!
ನ್ಯಾಯಾಲಯದಿಂದ ನೋಟಿಸ್ ಬಂದ ನಂತರವೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಮೋಸವಾಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ಖಾಸಗಿ ಕಂಪನಿಯಿAದ ಆದ ಮೋಸದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸಹ ಪೊಲೀಸ್ ದೂರು ನೀಡಿ, ಕಂಪನಿಯ ಅವ್ಯವಹಾರ ಬಯಲಿಗೆಳೆದಿದ್ದಾರೆ.
2017-18ನೇ ಸಾಲಿನಲ್ಲಿ ಕೃಷಿ ಇಲಾಖೆ ಅಗತ್ಯವಿರುವ ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ ಬೀಜ, ವಿವಿಧ ಲಘು ಪೋಷಕಾಂಶ, ಸುಣ್ಣ, ಎರೆಹುಳು ಗೊಬ್ಬರ, ಸಿಟಿ ಕಂಪೌಸ್ಟ್ ಪೂರೈಕೆಗಾಗಿ ದರಪಟ್ಟಿ ನಿಗದಿ ಮಾಡಲಾಗಿತ್ತು. ಈ ಸಾಮಗ್ರಿಗಳ ಪೂರೈಕೆಗಾಗಿ ಹೈದರಾಬಾದಿನ ಮುಕುಂದ ಮಹೇಶ್ವರಿ ಕಿಯಾ ಬಯೋಟಿಕ್ ಕಂಪನಿಯನ್ನು ಅಧಿಕೃತ ಸರಬರಾಜುದಾರರಾಗಿ ನೇಮಕ ಮಾಡಲಾಗಿತ್ತು. ರೈತರ ವಂತಿಗೆ ಸ್ವೀಕರಿಸಿದ ಈ ಕಂಪನಿ ಸರ್ಕಾರದಿಂದಲೂ ಸಹಾಯಧನಪಡೆದಿತ್ತು. ಆದರೆ, ಅಗತ್ಯ ಸಾಮಗ್ರಿಗಳನ್ನು ಮಾತ್ರ ಪೂರೈಕೆ ಮಾಡಿರಲಿಲ್ಲ.
ಸಬ್ಸಿಡಿ ದರದಲ್ಲಿ ಸಾಮಗ್ರಿ ಬರಬೇಕಾಗಿದನ್ನು ಜನರು ಮರೆತಿದ್ದರು. ಇಲಾಖೆಯವರು ಸಹ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದನ್ನು ಅರಿತಿದ್ದ ಕಂಪನಿ ಸಿದ್ದಾಪುರ ಕೃಷಿ ಇಲಾಖೆಗೆ ವಿವಿಧ ಸಾಮಗ್ರಿ ಪೂರೈಕೆ ಮಾಡಿದ ಬಗ್ಗೆ ನಕಲಿ ದಾಖಲೆ ಸೃಷ್ಠಿಸಿಕೊಂಡಿತ್ತು. ಅಲ್ಲಿಗೆ ಸುಮ್ಮನಾಗದ ಕಂಪನಿಯವರು `ತಾವು ಸಾಮಗ್ರಿ ಪೂರೈಸಿದರೂ ರೈತರು ಹಾಗೂ ಕೃಷಿ ಇಲಾಖೆಯವರು ಹಣ ಪಾವತಿ ಮಾಡಿಲ್ಲ’ ಎಂದು ತೆಲಂಗಾಣದ ಸೂಕ್ಷö್ಮ ಮತ್ತು ಸಣ್ಣ ಉದ್ದಿಮೆ ಮಂಡಳಿಯಲ್ಲಿ ಸರ್ಕಾರದ ವಿರುದ್ಧವೇ ಕೇಸು ದಾಖಲಿಸಿದ್ದರು!
ನ್ಯಾಯಾಲಯದ ಪ್ರಕರಣದ ಹಿನ್ನಲೆ ಸಿದ್ದಾಪುರದ ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಂ ಎಸ್ ಅವರು ಹಳೆಯ ದಾಖಲೆಗಳ ತಪಾಸಣೆ ಮಾಡಿದರು. ಆಗ, ಸಿದ್ದಾಪುರಕ್ಕೆ ಗೊಬ್ಬರ ಪೂರೈಕೆಯೇ ಆಗದಿರುವುದು ಗಮನಕ್ಕೆ ಬಂದಿತು. ಅಂಕೋಲಾಗೆ ಗೊಬ್ಬರ ಪೂರೈಸಿದ ದಾಖಲೆಯನ್ನು ಮುಂದಿರಿಸಿದ್ದ ಕಂಪನಿ ಅದೇ ದಾಖಲೆ ಆಧರಿಸಿ ಸಿದ್ದಾಪುರಕ್ಕೂ ಗೊಬ್ಬರ ಪೂರೈಸಿದ ಬಗ್ಗೆ ಹೇಳಿತ್ತು. ಗೊಬ್ಬರ ಪೂರೈಕೆ ಆಗದೇ ಇದ್ದರೂ ರೈತರು ಹಾಗೂ ಸರ್ಕಾರ ಎರಡು ಕಡೆಯಿಂದ ಕಂಪನಿಗೆ ಹಣ ಪಾವತಿ ಆಗಿದ್ದರೂ `ಬಿಲ್ ಬಾಕಿ’ ಎಂದು ಕೇಸ್ ಹಾಕಿದನ್ನು ಸುಮಾ ಎಂ ಎಸ್ ಅವರು ಗಮನಿಸಿದರು.
ಮೋಸ, ವಂಚನೆ ಮೂಲಕ ಸರ್ಕಾರಿ ಇಲಾಖೆಗೂ ಕೆಟ್ಟ ಹೆಸರು ಬರುವಂತೆ ಮಾಡಿದ ಮುಕುಂದ ಮಹೇಶ್ವರಿ ಕಿಯಾ ಬಯೋಟಿಕ್ ಕಂಪನಿ ವಿರುದ್ಧ ಅವರು ದೂರು ನೀಡಿದರು. ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದನ್ನು ಅವರು ವಿವರಿಸಿದರು. ಈ ಎಲ್ಲಾ ವಿಷಯ ಅರಿತ ಪೊಲೀಸರು ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.