ಸೂರಜ ಪಾಟೀಲ ಅವರ ಪುತ್ರ ಸಮೀರ ದೇಸಾಯಿ ಅವರು ಆರ್ಯ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದು, ಕಳ್ಳತನವನ್ನೇ ಅವರು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 21ನೇ ವಯಸ್ಸಿನಲ್ಲಿಯೇ ಬೆಳಗಾವಿಯ ಹಲವು ಕಡೆ ಕಳ್ಳತನ ನಡೆಸಿರುವ ಅವರು ಸದ್ಯ ಯಲ್ಲಾಪುರದಲ್ಲಿ ಎರಡು ಕಡೆ ತಮ್ಮ ಕೈ ಚಳಕ ಪ್ರದರ್ಶಿಸಿ ಸಿಕ್ಕಿ ಬಿದ್ದಿದ್ದಾರೆ.
ಜೊಯಿಡಾ ಅಣಶಿಯ ಕೊಣಮಣ ನುಜ್ಜಿಯ ಸಮೀರ ದೇಸಾಯಿ ಅವರು ಮೊದಲು ಕೂಲಿ ಕಾರ್ಮಿಕರಾಗಿದ್ದರು. ಯಾರು ಏನೇ ಕೆಲಸ ಹೇಳಿದರೂ ಅದನ್ನು ಮಾಡುತ್ತಿದ್ದರು. ಕೂಲಿ ಕೆಲಸದಿಂದ ಅವರು ಖ್ಯಾತಿ ಗಳಿಸಿದರೂ ಸದ್ಯ ಕಳ್ಳತನ ಪ್ರಕರಣಗಳಿಂದ ಅವರು ಕುಖ್ಯಾತಿಪಡೆದಿದ್ದಾರೆ. ಸದ್ಯ ಕೂಲಿ ಕೆಲಸ ಬಿಟ್ಟಿರುವ ಅವರು ಕಳ್ಳತನ ಮಾಡುವುದನ್ನೇ ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸಮೀರ ದೇಸಾಯಿ ಅವರನ್ನು ಯಲ್ಲಾಪುರ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ನವೆಂಬರ್ 1ರಂದು ಯಲ್ಲಾಪುರದ ಕಣ್ಣಿಗೇರಿಯ ಸಾರಬೈಲ್ ಬಳಿಯ ಮಿಲಾಗ್ರಿ ಸುನೀಲ ವಾಜ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಆ ಮನೆಯೊಳಗಿದ್ದ 17 ಗ್ರಾಂ ಬಂಗಾರದ ಜೊತೆ ಬೆಳ್ಳಿ ಆಭರಣಗಳು ಕಾಣೆಯಾಗಿದ್ದವು. 1.13 ಲಕ್ಷ ರೂ ಮೌಲ್ಯದ ಆಭರಣ ಕಳ್ಳತನ ನಡೆದಿರುವುದು ಮರುದಿನ ಗೊತ್ತಾಗಿದ್ದು, ಮಿಲಾಗ್ರಿ ಅವರು ಪೊಲೀಸ್ ದೂರು ನೀಡಿದ್ದರು.
ಅದಾದ ನಂತರ ನವೆಂಬರ್ 21ರಂದು ಮಲವಳ್ಳಿ ಸಂಕೇತ ಭಟ್ಟ ಅವರ ಒಡೆತನದ ಮಳಿಗೆಯಲ್ಲಿಯೂ ಕಳ್ಳತನ ನಡೆದಿತ್ತು. ಯಲ್ಲಾಪುರ ಹೃದಯಭಾಗದಲ್ಲಿರುವ ಸೀತಾಲಕ್ಷಿ ಮೆಡಿಕಲ್ ಶಾಪಿನ ಬಾಗಿಲು ಒಡೆದ ಕಳ್ಳರು 45 ಸಾವಿರ ರೂ ಹಣ ದೋಚಿದ್ದರು. ಈ ಬಗ್ಗೆ ಸಂಕೇತ ಭಟ್ಟ ಅವರು ಪೊಲೀಸ್ ದೂರು ನೀಡಿದ್ದರು. ಈ ಎರಡು ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಸಮೀರ ದೇಸಾಯಿ ಎದುರಾದರು.
ಕೂಲಿ ಕೆಲಸ ಮಾಡುವ ವ್ಯಕ್ತಿ ಆ ಪ್ರಮಾಣದಲ್ಲಿ ಐಷಾರಾಮಿ ಬದುಕು ಸಾಗಿಸುವುದನ್ನು ನೋಡಿ ಪೊಲೀಸರು ಅನುಮಾನಪಟ್ಟರು. ಪಿಐ ರಮೇಶ ಹಾನಾಪುರ ಜೊತೆ ಎಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಸೇರಿ ವಿಚಾರಣೆ ನಡೆಸಿದರು. ಆಗ, ಆ ಸಮೀರ್ ದೇಸಾಯಿ ಅವರು ಯಲ್ಲಾಪುರದ ಎರಡು ಕಡೆ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡರು. ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಕೆ, ನಾಗರಾಜ ನಾಯ್ಕ, ನೀಲಪ್ಪ ಸಿಟಿ ಜೊತೆ ಟೆಕ್ನಿಕಲ್ ವಿಭಾಗದ ಉದಯ ಗುನಗಾ ಅವರ ಸಹಕಾರದಿಂದ ಸಮೀರ ದೇಸಾಯಿ ಅವರು ಜೈಲು ಸೇರಿದರು.