ಯಲ್ಲಾಪುರದ ಅರಬೈಲ್ ಘಟ್ಟದ ಬಳಿ ಕಳೆದ ವಾರ ಕೆಟ್ಟ ಕಾರಿನಲ್ಲಿ ಸುಟ್ಟ ಶವ ಸಿಕ್ಕ ಪ್ರಕರಣ ಮತ್ತೊಂದು ತಿರುವುಪಡೆದಿದ್ದು, ಮೂವರು ಸೇರಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದು ದೃಢವಾಗಿದೆ. ಆ ಮೂವರು ಸಾಕ್ಷಿ ನಾಶಕ್ಕಾಗಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದನ್ನು ಪಿಐ ರಮೇಶ ಹಾನಾಪುರ ಅವರು ಕಂಡುಹಿಡಿದಿದ್ದು, ಕೊಲೆಗೆಡುಕರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ.
2026ರ ಏಪ್ರಿಲ್ 8ರಂದು ಅರಬೈಲ್ ಘಟ್ಟ ಪ್ರದೇಶದ ತಾಳಿಕುಂಬ್ರಿ ಬಸ್ ನಿಲ್ದಾಣದ ಬಳಿ ಕಾರೊಂದು ಬೆಂಕಿಗೆ ಆಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಸಿಕ್ಕಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಎಲುಬು ಮಾತ್ರ ಕಾಣಿಸಿದ್ದರಿಂದ ಸಾವನಪ್ಪಿದವರ ಗುರುತು ಪತ್ತೆ ಹಚ್ಚುವುದು ಸಹ ಸವಾಲಾಗಿತ್ತು. ಮೊದಲು ಇದನ್ನು ಅಪಘಾತ ಎಂದೇ ಭಾವಿಸಲಾಗಿದ್ದು, ಪೊಲೀಸರು ಅಪಘಾತ ಪ್ರಕರಣವನ್ನು ದಾಖಲಿಸಿದ್ದರು.
ಆ ದಿನ ಏನಾಗಿತ್ತು? ಇದನ್ನು ಓದಿ: ಅರೆಬೆಂದ ಕಾರು-ಕರಕಲಾದ ಶವ!
ಅದಾದ ನಂತರ ಬೆಳಗಾವಿಯ ಕನಬರಗಿಯ ನಿತೀಶ್ ಧಾಪಳೆ ಅವರು ಕಾರಿನಲ್ಲಿ ಸುಟ್ಟು ಕರಕಲಾದ ಬಗ್ಗೆ ಮಾಹಿತಿ ಬಂದಿತ್ತು. ಅವರ ತಂದೆ ಜಗನ್ನಾಥ ದಾಫಳೆ ಅವರು ಕಾರಿನ ಗುರುತು ಹಿಡಿದು ತಮ್ಮ ಮಗ ಸಾವನಪ್ಪಿರುವ ಬಗ್ಗೆ ಶಂಕೆವ್ಯಕ್ತಪಡಿಸಿದ್ದರು. ಆದರೆ, ಮರುದಿನ ಮತ್ತೆ ಪೊಲೀಸ್ ಠಾಣೆಗೆ ಹಾಜರಾದ ಜಗನ್ನಾಥ ದಾಫಳೆ ಅವರು ಕಾರಿನಲ್ಲಿ ಶವ ಚಾಲಕನ ಸೀಟಿನಲ್ಲಿರುವ ಬದಲು ಹಿಂದಿನ ಸೀಟಿನಲ್ಲಿದ್ದ ಕಾರಣ ಕೊಲೆಯ ಅನುಮಾನವ್ಯಕ್ತಪಡಿಸಿದ್ದರು. ಜೊತೆಗೆ ನಿತೀಶ್ ಧಾಪಳೆ ಅವರು ಪತ್ನಿಗೆ ಫೋನ್ ಮಾಡಿ ನಯೀಂ ಎಂಬಾತರ ಜೊತೆ ಗೋವಾಗೆ ಹೋಗುವ ಬಗ್ಗೆ ತಿಳಿಸಿದನ್ನು ಹೇಳಿದ್ದರು.
ಜಗನ್ನಾಥ ದಾಫಳೆ ಹೇಳಿದ್ದೇನು? ಇಲ್ಲಿ ಓದಿ: ಕಂದಕಕ್ಕೆ ಬಿದ್ದ ಕಾರಿಗೆ ಬೆಂಕಿ-ಅನುಮಾನ!
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಜೊತೆ ಚರ್ಚಿಸಿದ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ವಿಶೇಷ ತಂಡ ರಚಿಸಿದರು. ಪಿಸೈ ರಾಜಶೇಖರ್ ವಂದಲಿ, ಸಿದ್ದಪ್ಪ ಗುಡಿ ಜೊತೆ ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಬಸವರಾಜ ಹಗರಿ, ಧರ್ಮ ನಾಯ್ಕ, ಉಮೇಶ ತುಂಬರಗಿ, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಎಸ್, ಸುರೇಶ ಕಾಂಟ್ರಾಕ್ಟರ್, ಮಹಾವೀರ ಡಿಎಸ್, ರಾಚಪ್ಪ, ಸಂತೋಷ ಬಾಳೇರ್ ಕಾರ್ಯಾಚರಣೆಗಿಳಿದರು. ಕಾರವಾರ ಟೆಕ್ನಿಕಲ್ ವಿಭಾಗದ ಬಬನ್ ಕದಂ, ಉದಯ ಗುನಗಾ ಹಾಗೂ ಮಹಾಲಿಂಗ ಸಾವಳಗಿ ಅವರು ತಾಂತ್ರಿಕ ಆಧಾರದಲ್ಲಿ ಆರೋಪಿತರನ್ನು ಹುಡುಕಿದರು.
ವಿವಿಧ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಶೋಧನೆ, ಖಚಿತ ಮಾಹಿತಿ ಹಾಗೂ ಇನ್ನಿತರ ದಾಖಲೆಗಳನ್ನು ಸಂಗ್ರಹಿಸಿದ ಪೊಲೀಸರಿಗೆ ಕೊಲೆಗೆಡುಕರು ಸಿಕ್ಕಿಬಿದ್ದರು. ಹಳೆ ಹುಬ್ಬಳ್ಳಿಯ ಅಬ್ದುಲ್ ನಹೀಂ ಬಸೀರ್ ಅಹಮದ್ ಮುಜಾವರ್ ಹೆಗ್ಗೇರಿ, ಮೌಲಸಾಬ್ ಬಾಬಾಜನ್ ಬಾಡ, ದಾದಾಪಿರ್ (ಅಲ್ತಾಪ್) ಮೆಹಬೂಬ್ ಸಾಬ್ ಬಾಳಸಂಗಿ ಸೇರಿ ನಿತೀಶ್ ದಾಫಳೆ ಅವರನ್ನು ಕೊಲೆ ಮಾಡಿದನ್ನು ಪೊಲೀಸರು ಕಂಡುಹಿಡಿದರು. ವೈಯಕ್ತಿಕ ದ್ವೇಷದ ಹಿನ್ನಲೆ ನಿತೀಶ್ ದಾಫಳೆ ಅವರನ್ನು ಕೊಂದ ಮೂವರನ್ನು ಸೆದೆಬಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.