ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಓವರ್ ಲೋಡ್ ಟಿಪ್ಪರ್ ಸಂಚಾರ ಜೋರಾಗಿದ್ದು, ಇದನ್ನು ತಡೆಯುವಂತೆ ಸ್ವತಃ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಸಹ ಆ ಅಧಿಕಾರಿಗಳು ಪಾಲಿಸುತ್ತಿಲ್ಲ.
`ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು ವಾರದ ಹಿಂದೆ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳರೀ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸರು-ಸಾಮಗ್ರಿ ಸಾಗಿಸುವ ವಾಹನಗಳ ಬಗ್ಗೆ ವಿಶೇಷ ಗಮನಹರಿಸಿ ಮಾತನಾಡಿದ ಅವರು `ಸರಕು-ಸಾಗಣಿಕೆ ವಾಹನಗಳಲ್ಲಿ ಸರಕು ಮತ್ತು ಸಾಮಗ್ರಿಗಳ ಓವರ್ ಲೋಡ್ ಕಂಡುಬoದಲ್ಲಿ ಕೂಡಲೇ ಪ್ರಕರಣ ದಾಖಲಿಸಬೇಕು’ ಎಂದು ಸೂಚನೆಯನ್ನು ನೀಡಿದ್ದಾರೆ. `ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ತಪಾಸಣೆ ನಡೆಸಬೇಕು’ ಎಂದು ಸಹ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹೇಳಿದ್ದಾರೆ. ಈ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಅದಕ್ಕೆ ತಲೆಯಾಡಿಸಿದ್ದು, ಸಭೆಯಿಂದ ಹೊರಹೋದ ನಂತರ ಡೀಸಿ ಹೇಳಿದ ಮಾತುಗಳನ್ನು ಮರೆತಿದ್ದಾರೆ.
ಅದರ ಪರಿಣಾಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕ ಬಾರ ಹೊತ್ತು ಸಾಗುವ ಲಾರಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಪ್ರತಿ ದಿನ ರಾತ್ರಿ ಭಾರೀ ಪ್ರಮಾಣದ ಲಾರಿಗಳು ರಸ್ತೆಗಿಳಿಯುತ್ತಿವೆ. ಅನೇಕ ಅಪಘಾತಗಳಿಗೆ ಈ ಲಾರಿಯಲ್ಲಿನ ಅತಿಯಾದ ಬಾರ ಕಾರಣವಾಗುತ್ತಿದ್ದು, ಜನರ ಜೀವ ಹೋಗುವ ಸನ್ನಿವೇಶ ಬಂದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾತ್ರ ರಾತ್ರಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. `ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ದಿಷ್ಟ ಒಂದು ರಸ್ತೆಯಲ್ಲಿ ಮಾತ್ರ ತಪಾಸಣೆಗಳನ್ನು ಕೈಗೊಳ್ಳದೇ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಬೇಕು’ ಎಂದು ಡೀಸಿ ಸೂಚಿಸಿದರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸದ್ಯ ತಡಸ್-ಕೈಗಾ ಮಾರ್ಗವಾಗಿ ಭಾರೀ ಪ್ರಮಾಣದ ಸರಕು ಹೊತ್ತ ಲಾರಿಗಳು ಸಂಚರಿಸುತ್ತಿದೆ. ಕೈಗಾ ಅಣು ವಿದ್ಯುತ್ ಘಟಕದ ಕಾಮಗಾರಿಗಾಗಿ ಕಲ್ಲುಗಳ ಸಾಗಾಟ ನಡೆದಿದ್ದು, ಅಪಾಯಕಾರಿ ರೀತಿಯಲ್ಲಿ ಟಿಪ್ಪರ್ ಓಡಾಟ ನಡೆದಿದೆ. ಪ್ರತಿ ದಿನ ರಾತ್ರಿ 10 ಗಂಟೆ ನಂತರ ಇಂಥ ಟಿಪ್ಪರ್ ರಸ್ತೆಗಿಳಿಯುತ್ತಿದೆ. ಅಪಾಯಕಾರಿ ರೀತಿಯಲ್ಲಿರುವ ಲಾರಿಗಳನ್ನು ಹಿಡಿದು ಫೋನ್ ಮಾಡಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರುತ್ತಿಲ್ಲ ಎಂಬ ಆರೋಪವಿದೆ. ಓವರ್ ಲೋಡ್ ಲಾರಿಗಳ ಓಡಾಟದಿಂದ ಅಪಘಾತ, ರಸ್ತೆ ಹಾಳಾಗುವಿಕೆ ಸಾಮಾನ್ಯವಾಗಿದ್ದರೂ ಕಾನೂನು ಕ್ರಮ ಜರುಗಿಸುವವರಿಲ್ಲದಿರುವುದು ಜನಸಾಮಾನ್ಯರ ಬೇಸರಕ್ಕೆ ಕಾರಣವಾಗಿದೆ. ಕೆಲವರ ಹಪಾಹಪಿತನದಿಂದ ನ್ಯಾಯಯುತವಾಗಿ ಟಿಪ್ಪರ್ ಓಡಿಸುವವರು ಸಹ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಓವರ್ ಲೋಡ್ ಲಾರಿಗಳ ವಿರುದ್ಧ ಕ್ರಮವಾಗದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಲಾರಿ ಮಾಲಕರ ಸಂಘದವರು ಎಚ್ಚರಿಸಿದ್ದಾರೆ.