ಅಂಕೋಲಾದಿoದ ಕಾರವಾರ ಕಡೆ ಹೋಗುತ್ತಿದ್ದ ಸೀಬರ್ಡ ಬಸ್ಸು ಅವರ್ಸಾ ಬಳಿ ಅಪಘಾತಕ್ಕೀಡಾಗಿದೆ. ಕಂದಕಕ್ಕೆ ಬೀಳುತ್ತಿದ್ದ ಬಸ್ಸನ್ನು ಮರ ಹಿಡಿದಿಟ್ಟುಕೊಂಡಿದ್ದು, ಮರದ ರಕ್ಷಣೆ ಸಿಕ್ಕ ಕಾರಣ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಬೆಳಗ್ಗೆ ಅಂಕೋಲಾ ಕಡೆಯಿಂದ ಕಾರವಾರ ಕಡೆ ಸೀಬರ್ಡ ಬಸ್ ಹೊರಟಿತ್ತು. ಅವರ್ಸಾದ ಕವಲಗದ್ದ ಸೇತುವೆ ಬಳಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಬಸ್ಸು ರಸ್ತೆ ಅಂಚಿನ ಕಂದಕದ ಕಡೆ ಮುಖ ಮಾಡಿತು. ಅದಾದ ನಂತರ ಅಲ್ಲಿದ್ದ ಮರಕ್ಕೆ ಬಸ್ಸು ಗುದ್ದಿ ಪಲ್ಟಿಯಾಯಿತು. ಅದೇ ಮರ ಬಸ್ಸನ್ನು ಹಿಡಿದುಕೊಂಡಿದ್ದು, ಇನ್ನಷ್ಟು ಅಪಾಯ ತಪ್ಪಿತು.
ಅಪಘಾತಕ್ಕೀಡಾದ ಆ ಬಸ್ಸಿನಲ್ಲಿ 25 ಪ್ರಯಾಣಿಕರಿದ್ದು, ಅವರಲ್ಲಿ ಅನೇಕರಿಗೆ ಸಣ್ಣಪುಟ್ಟ ಗಾಯಗಳಾದವು. ಎಲ್ಲರೂ ಬಸ್ಸಿನಿಂದ ಬೇಗ ಇಳಿದು ಪ್ರಾಣಾಪಾಯದಿಂದ ಪಾರಾದರು. ಅದಾಗಿಯೂ, ಇಬ್ಬರಿಗೆ ಗಂಭೀರ ಪ್ರಮಾಣದಲ್ಲಿ ನೋವಾಗಿದ್ದು, ಅವರನ್ನು ತುರ್ತಾಗಿ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿದರು. ಮಾಹಿತಿ ಆಧರಿಸಿ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು ಅಲ್ಲಿದ್ದ ಸಿಬ್ಬಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಆಗಿದ್ದು, ಅದನ್ನು ಸರಿಪಡಿಸಿದ್ದಾರೆ.